ಓ. ಪನ್ನಿರ ಸೆಲ್ವಂ ತಮಿಳುನಾಡಿನ ನೂತನ ಮುಖ್ಯಮಂತ್ರಿ
ಚೆನ್ನೈ : ಎ.ಐ.ಎ.ಡಿ.ಎಂ.ಕೆ ಶಾಸಕ ಓ. ಪನ್ನೀರ ಸೆಲ್ವಂ ಶುಕ್ರವಾರ ರಾತ್ರಿ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜಭವನದಲ್ಲಿ ನಡೆದ ಸರಳ ಹಾಗೂ ಸಂಭ್ರಮ ರಹಿತ ಕಾರ್ಯಕ್ರಮದಲ್ಲಿ ಸೆಲ್ವಂ ಅವರಿಗೆ, ರಾಜ್ಯಪಾಲರಾದ ರಂಗರಾಜನ್ ಪ್ರಮಾಣ ವಚನ ಭೋದಿಸಿದರು.
ಇದೇ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದ ಸೆಲ್ವಂ, ಜಯಲಲಿತಾ ಅವರ ಆಪ್ತ ಗೆಳತಿ ಶಶಿಕಲಾ ಅವರ ಬೆಂಬಲದಿಂದ ಜಯಾ ಸಚಿವ ಸಂಪುಟದಲ್ಲಿ ಕಂದಾಯ ಸಚಿವರಾಗಿದ್ದರು. ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಜಯಾ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ 10ರಲ್ಲಿ ಒಬ್ಬರಾಗಿದ್ದ ಸೆಲ್ವಂ ಇದ್ದಕ್ಕಿದ್ದಂತೆ ನಂ1 ಆದರು.
ಥೇವಾರಂ ಜನಾಂಗಕ್ಕೆ ಸೇರಿದವರಾದ ಸೆಲ್ವಂ ತಮಿಳುನಾಡಿನ ದಕ್ಷಿಣ ಭಾಗದಿಂದ ಆಯ್ಕೆಯಾಗಿ ಮುಖ್ಯಮಂತ್ರಿ ಪದಕ್ಕೇರಿದ ಎರಡನೇ ವ್ಯಕ್ತಿ. ಇದಕ್ಕೆ ಮುನ್ನ ಕೆ. ಕಾಮರಾಜ್ ಅವರು ಮಾತ್ರ ಈ ಗೌರವಕ್ಕೆ ಪಾತ್ರರಾಗಿದ್ದರು. ಜಯಾ ರಾಜೀನಾಮೆ ನಂತರ ನಡೆದ ಎ.ಐ.ಎ.ಡಿ.ಎಂ.ಕೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಸೆಲ್ವಂ ಅವರನ್ನು ನಾಯಕನಾಗಿ ಆರಿಸಲಾಯಿತು.
ಸೆಲ್ವಂ ಅವರು ಶಶಿಕಲಾ ಅವರ ಪತಿ ಟಿ.ಟಿ.ವಿ. ದಿನಕರನ್ ಅವರ ಪರಮಾಪ್ತರು. ರೈತ ಕುಟುಂಬದಲ್ಲಿ ಹುಟ್ಟಿದ ಪನ್ನೀರ ಸೆಲ್ವಂರಿಗೆ ಇದು ಬಯಸದೇ ಬಂದ ಭಾಗ್ಯ. ಶುಕ್ರವಾರ ಸೆಲ್ವಂ ಅವರೊಂದಿಗೆ 24 ಸಚಿವರು ಪ್ರಮಾಣ ವಚನ ಸ್ವೀಕರಿಸಿದರು.
(ಪಿ.ಟಿ.ಐ/ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...