ಇಂದಿರಮ್ಮನ ಕುರಿತು ಖುಷ್ವಂತಜ್ಜ ಬರೆದ ಪುಸ್ತಕ ಪ್ರಕಟಣೆಗೆ ಕೋರ್ಟ್ ಅಸ್ತು
ನವದೆಹಲಿ : ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಕುರಿತಾದ Truth, Love and a Little Malice: An Autobiography ಪುಸ್ತಕವನ್ನು ಪ್ರಕಟಿಸಲು ಪ್ರಸಿದ್ಧ ಲೇಖಕ ಖುಷ್ವಂತ್ ಸಿಂಗ್ ಅವರಿಗೆ ದೆಹಲಿ ಹೈಕೋರ್ಟ್ ಹಸಿರು ನಿಶಾನೆ ತೋರಿಸಿದೆ.
ಇಂದಿರಾಗಾಂಧಿ ಅವರ ಸೊಸೆ ಹಾಗೂ ಕೇಂದ್ರ ಸಚಿವೆ ಮನೇಕಾಗಾಂಧಿ ಸಲ್ಲಿಸಿದ್ದ ಆಕ್ಷೇಪ ಅರ್ಜಿಯ ಹಿನ್ನೆಲೆಯಲ್ಲಿ ಈ ಮುನ್ನ ಸಲ್ಲಿಸಿದ್ದ ತಡೆಯಾಜ್ಞೆಯನ್ನು ಹೈಕೋರ್ಟ್ ಮಂಗಳವಾರ ತೆರವುಗೊಳಿಸಿತು. ನ್ಯಾಯಮೂರ್ತಿಗಳಾದ ದೇವೀಂದರ್ ಗುಪ್ತ ಹಾಗೂ ಎಸ್.ಕೆ. ಕೌಲ್ ಅವರಿದ್ದ ನ್ಯಾಯಪೀಠ ಈ ತೆರವು ಆಜ್ಞೆ ನೀಡಿತು.
ನಾಲ್ಕು ವರ್ಷಗಳ ಹಿಂದೆ ಈ ಪುಸ್ತಕದ ಕೆಲವು ಭಾಗಗಳು ನಿಯತಕಾಲಿಕವೊಂದರಲ್ಲಿ ಪ್ರಕಟವಾಗಿದ್ದವು. ಇಂದಿರಾಗಾಂಧಿ ಅವರ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಘಟನೆಗಳನ್ನು ತಿರುಚಲಾಗಿದೆ ಎಂದು ಆಪಾದಿಸಿ ಪುಸ್ತಕವನ್ನು ಪ್ರಕಟಿಸದಂತೆ ಮನೇಕಾಗಾಂಧಿ ನ್ಯಾಯಾಲಯದ ಕಟ್ಟೆ ಹತ್ತಿದ್ದರು. ಪುಸ್ತಕವನ್ನು ಪ್ರತಿಬಂಧಿಸುವುದು ಸಂವಿಧಾನ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ವಿರುದ್ಧವಾದುದು ಎಂದು ಖುಷ್ವಂತ್ ಸಿಂಗ್ ವಾದಿಸಿದ್ದರು.
ಖುಷ್ವಂತ್ರ ವಾದವನ್ನು ಪುರಸ್ಕರಿಸಿರುವ ಹೈಕೋರ್ಟ್, ನ್ಯಾಯಾಲಯದ ವೆಚ್ಚವಾಗಿ 10 ಸಾವಿರ ರುಪಾಯಿಗಳನ್ನು ಖುಷ್ವಂತ್ಗೆ ನೀಡುವಂತೆ ಮನೇಕಾಗಾಂಧಿ ಅವರಿಗೆ ಆದೇಶಿಸಿದೆ.
ಸಾರ್ವಜನಿಕ ಕ್ಷೇತ್ರದ ಮುಖಂಡರ ಜೀವನ ಸಾರ್ವಜನಿಕರ ಅವಗಾಹನೆಯ ವಿಷಯವಾಗಿದ್ದು , ಪುಸ್ತಕದಲ್ಲಿ ಆಕ್ಷೇಪಾರ್ಹ ಅಂಶಗಳೇನೂ ಇಲ್ಲ ಎಂದು ಖುಷ್ವಂತ್ ವಕೀಲರು ವಾದಿಸಿದ್ದರು. ಆದರೆ, ಮನೇಕಾ ವಕೀಲರು ಸಾರ್ವಜನಿಕ ಮುಖಂಡರು ಕೂಡ ವೈಯಕ್ತಿಕ ಜೀವನವನ್ನು ಹೊಂದಿರುತ್ತಾರೆ. ಅದನ್ನು ಕೆದಕುವುದು ಸಲ್ಲದೆಂದು ವಾದಿಸಿದ್ದರು. ನೀವೇನಂತೀರಿ?
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...