ಕಾಸರಗೋಡಿನಲ್ಲಿ ತಜ್ಞರಿಂದ ಎಂಡೋಸಲ್ಫಾನ್ ಪರಿಣಾಮ ಅಧ್ಯಯನ
ಕಾಸರಗೋಡು : ಎಂಡೋಸಲ್ಫಾನ್ ಕೀಟನಾಶಕ ಸಿಂಪಡಣೆಯಿಂದ ಜಿಲ್ಲೆಯಾದ್ಯಂತ ತಲೆದೋರಿರುವ ಆರೋಗ್ಯ ಸಮಸ್ಯೆಗಳ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಸಲು ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್ನ ಅಹ್ಮದಾಬಾದ್ ಘಟಕದ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಒಕ್ಯುಪೇಷನ್ ಹೆಲ್ತ್ ತಂಡ ಆಗಮಿಸಲಿದೆ.
ಡಾ. ಎಚ್. ಎನ್. ಸಯ್ಯದ್ ಅವರ ನೇತೃತ್ವದ ತಂಡ ಈ ತಿಂಗಳ ಕೊನೆಗೆ ಅಧ್ಯಯನ ಕಾರ್ಯ ಕೈಗೆತ್ತಿಕೊಳ್ಳಲಿದ್ದು, ಜಿಲ್ಲೆಯಲ್ಲಿ ಮಾತ್ರವಲ್ಲದೆ, ಕರ್ನಾಟಕದ ಮಂಗಳೂರು, ಉತ್ತರ ಕನ್ನಡ ಜಿಲ್ಲೆಗಳಿಗೂ ಭೇಟಿ ನೀಡಲಿದೆ.
ಕೊಳೆ ರೋಗ ನಿಯಂತ್ರಣಕ್ಕಾಗಿ ಅಡಿಕೆ ಮರಕ್ಕೆ ಎಂಡೋಸಲ್ಫಾನ್ ಸಿಂಪಡಿಸುವುದರಿಂದ ಪಾರ್ಶ್ವ ಪರಿಣಾಮಗಳು ಉಂಟಾಗಿದ್ದು, ಹಲವು ಮಕ್ಕಳು ಅಂಗವಿಕವರಾದ ಘಟನೆಗಳೂ ವರದಿಯಾಗಿದ್ದವು. ಈ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಈ ತಂಡ ಅಧ್ಯಯನ ನಡೆಸಲಿದೆ. ಕೇಂದ್ರ ಮಾನವ ಹಕ್ಕುಗಳ ಆಯೋಗದ ಆದೇಶದ ಮೇಲೆ ಆಗಮಿಸಲಿರುವ ಈ ತಂಡದ ಅಧ್ಯಯನ ಕಾರ್ಯದಲ್ಲಿ ಮಂಗಳೂರು ಮತ್ತು ಕೋರಿkುಕ್ಕೋಡ್ನ ವೈದ್ಯಕೀಯ ಕಾಲೇಜುಗಳ ವಿದ್ಯಾರ್ಥಿಗಳೂ ಪಾಲ್ಗೊಳ್ಳಲಿದ್ದಾರೆ.
ಎಂಡೋಸಲ್ಫಾನ್ ಕೀಟ ನಾಶಕ ಸಿಂಪಡಣೆಯನ್ನು ನಿಷೇಧಿಸಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಜ್ಞೆ ಹೊರಡಿಸಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
(ಇನ್ಫೋ ವಾರ್ತೆ)