ನಂದಿ ಬೆಟ್ಟಕ್ಕೆ ಕಾಯಕಲ್ಪ..
ಬೆಂಗಳೂರು : ‘ಅದು ಬೆಟ್ಟ ಇದು ಬೆಟ್ಟವೋ ನಂಜುಂಡ, ಕುಡುಕರಿಗೆ ನಂದಿ ಬೆಟ್ಟವೋ..’ ಎಂಬ ಅಪಖ್ಯಾತಿಗೆ ಗುರಿಯಾಗಿರುವ ಬೆಂಗಳೂರಿನ ಬಳಿಯ ಪ್ರಸಿದ್ಧ ಗಿರಿಧಾಮ ನಂದಿಯನ್ನು ಅಭಿವೃದ್ಧಿ ಪಡಿಸಿ, ಅಲ್ಲಿ ಪ್ರವಾಸಿಗರಿಗೆ ಮುಕ್ತ ವಾತಾವರಣ ಕಲ್ಪಿಸುವ ಕಾರ್ಯ ನಡೆಯುತ್ತಿದೆ.
ವಾರದ ಕೊನೆಯಲ್ಲಿ ಈ ಬೆಟ್ಟಕ್ಕೆ ದಾಳಿ ಇಟ್ಟು, ಕುಡಿದು, ಕುಣಿದು, ಕುಪ್ಪಳಿಸಿ ಇಡೀ ಪರಿಸರವನ್ನೇ ಹಾಳು ಮಾಡುತ್ತಿದ್ದ ಪುಂಡರಿಗೆ ಕಡಿವಾಣ ಹಾಕಿ, ಇದನ್ನು ಪರಿಸರ ಸ್ನೇಹಿ ಹಾಗೂ ಪ್ರವಾಸಿ ಸ್ನೇಹಿ ಮಾಡುವ ಬಗ್ಗೆ ಚಿಂತಿಸಿರುವ ತೋಟಗಾರಿಕೆ ಇಲಾಖೆ ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ.
ಈ ಬೆಟ್ಟದ ಮೇಲೆ ಪ್ರವಾಸಿಗರಿಗೆ ಹೆಚ್ಚುವರಿ ಸೌಲಭ್ಯ ಒದಗಿಸಿ, ಜನಾಕರ್ಷಣೆಯ ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ, ವಿಶ್ವವಿಖ್ಯಾತ ಲಾಲ್ಬಾಗ್ ಉಸ್ತುವಾರಿ ನೋಡಿಕೊಳ್ಳುತ್ತಿರುವ ಗಾರ್ಡನ್ ಸಿಟಿ ಟ್ರಸ್ಟ್ ಮಾದರಿಯಲ್ಲೇ ನಂದಿ ಹಿಲ್ಸ್ ಟ್ರಸ್ಟ್ ರಚಿಸಬೇಕು ಎಂಬ ಪ್ರಸ್ತಾವನೆಯನ್ನು ತೋಟಗಾರಿಕೆ ಇಲಾಖೆ ಸರಕಾರದ ಮುಂದಿಟ್ಟಿದೆ.
ಈ ಟ್ರಸ್ಟ್ ಯೋಜನೆ ಕಾರ್ಯಗತವಾದರೆ, ಇದೊಂದು ಉತ್ತಮ ಪ್ರವಾಸಿ ತಾಣವಾಗಿ ಹೊರಹೊಮ್ಮುವುದಲ್ಲದೆ, ರಾಜ್ಯದ ಬೊಕ್ಕಸಕ್ಕೆ ಆದಾಯ ತರುವ ಮೂಲವೂ ಆಗುತ್ತದೆ ಎನ್ನುವ ಹಿರಿಯ ಅಧಿಕಾರಿಗಳು, ಈ ತಾಣವನ್ನು ಕಬಳಿಸುವ ಹುನ್ನಾರ ನಡೆಸುತ್ತಿರುವ ಪ್ರವಾಸೋದ್ಯಮ ನಿಗಮದ ಪ್ರಯತ್ನದ ಬಗ್ಗೆ ಆಂತಕ ವ್ಯಕ್ತಪಡಿಸಿದ್ದಾರೆ.
ಹಲವು ಅವ್ಯವಸ್ಥೆಗಳ ನಡುವೆಯೂ ಈ ವರ್ಷ ನಂದಿ ಬೆಟ್ಟಕ್ಕೆ ಭೇಟಿಕೊಟ್ಟ ಪ್ರವಾಸಿಗರಿಂದ ಇಲಾಖೆಯು 36 ಲಕ್ಷ ರುಪಾಯಿಗಳನ್ನು ಸಂಗ್ರಹಿಸಿ, ಸರಕಾರಕ್ಕೆ ನೀಡಿದೆ. ಹಾಲಿ ಬೆಟ್ಟಕ್ಕೆ ಭೇಟಿ ನೀಡುವವರಿಂದ ಕೇವಲ 2 ರುಪಾಯಿ ಮಾತ್ರ ಶುಲ್ಕ ಪಡೆಯಲಾಗುತ್ತಿದೆ. ಈ ಶುಲ್ಕವನ್ನು ಹೆಚ್ಚಿಸಿದರೆ, ಆದಾಯ ಹೆಚ್ಚಿ, ಪ್ರವಾಸಿಗರಿಗೆ ಹೆಚ್ಚಿನ ಅನುಕೂಲತೆ ಮಾಡಿಕೊಡಬಹುದು ಎಂದು ಬೆಟ್ಟದ ವಿಶೇಷಾಧಿಕಾರಿ ಎಂ.ವಿ. ಶ್ರೀನಿವಾಸ ರೆಡ್ಡಿ ದಿನಪತ್ರಿಕೆಯಾಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.
1834ರಲ್ಲಿ ಬ್ರಿಟಿಷ್ ಕಮಿಷನರ್ ಕಬ್ಬನ್ ಅವರು ನಿರ್ಮಿಸಿದ್ದ ಕಬ್ಬನ್ ಭವನವನ್ನು ಅತಿಥಿಗಳ ಉಪಯೋಗಕ್ಕಾಗಿ ಮತ್ತೆ ತೆರೆದಿರುವುದರಿಂದ, ಇದು ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತಿದೆ ಎನ್ನುತ್ತಾರೆ ಅವರು. 1986ರ ಸಾರ್ಕ್ ಸಮ್ಮೇಳನಾ ನಂತರ 13 ವರ್ಷಗಳ ಕಾಲ ಈ ಅತಿಥಿಗೃಹ ಮುಚ್ಚಿತ್ತು.
ಸಮ್ಮೇಳನ- ಸಮಾವೇಶಕ್ಕೆ ಸೂಕ್ತ ಜಾಗ : ಬೆಟ್ಟದ ಮೇಲೆ ಸಾಮಾನ್ಯ ಕೊಠಡಿಗಳಿಗೆ ದಿನಕ್ಕೆ ಕೇವಲ 200 ರುಪಾಯಿ ಬಾಡಿಗೆ. ಕಾಟೇಜ್ಗಳಿಗೆ 250 ರುಪಾಯಿ. ಫ್ಯಾಮಿಲಿ ಕಾಟೇಜ್ಗಳಿಗೆ 350 ಮತ್ತು ವಿ.ಐ.ಪಿ. ಗೆಸ್ಟ್ಹೌಸ್ಗಳಿಗೆ 1000 ರುಪಾಯಿ ಮಾತ್ರ ಬಾಡಿಗೆ ವಿಧಿಸಲಾಗಿದೆ.
ಸುಸಜ್ಜಿತವಾದ ಈ ಕೊಠಡಿಗಳಲ್ಲಿ ಸಮ್ಮೇಳನ - ಸಮಾವೇಶ ನಡೆಸಬಹುದಾಗಿದೆ. ಈಬಗ್ಗೆ ಹೆಚ್ಚಿನ ಪ್ರಚಾರ ದೊರೆತರೆ, ಇದು ರಾಜ್ಯದ ಬೊಕ್ಕಸಕ್ಕೆ ಹೆಚ್ಚುವರಿ ಆದಾಯ ತರುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
- ಮುಖಪುಟ / ನೋಡು ಬಾ ನಮ್ಮೂರ