‘ವೀರಶೈವರು ಮನಸ್ಸು ಮಾಡಿದಲ್ಲಿ ರಾತ್ರೋರಾತ್ರಿ ಸರ್ಕಾರದ ಪತನ’
ಗುಲ್ಬರ್ಗಾ : ವೀರಶೈವ ಲಿಂಗಾಯತ ಮಠಾಧೀಶರು ಮನಸ್ಸು ಮಾಡಿದಲ್ಲಿ ರಾತೋ ರಾತ್ರಿ ಸರಕಾರವನ್ನು ಉರುಳಿಸಬಲ್ಲರು ಎಂದು ಸುಲಫಲ ಮಠದ ಬಸವ ಕೇಂದ್ರದ ಮಹಾಂತೇಶ ಶಿವಾಚಾರ್ಯ ಸ್ವಾಮೀಜಿ ಎಸ್.ಎಂ.ಕೃಷ್ಣ ನೇತೃತ್ವದ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.
ಕಾಂಗ್ರೆಸ್ ಸರಕಾರ ವೀರಶೈವರನ್ನು ಮೂಲೆಗುಂಪು ಮಾಡುತ್ತಿದೆ. ಪ್ರತಿ ಕ್ಷೇತ್ರದಲ್ಲೂ ಸಮಾಜವನ್ನು ತುಳಿಯಲು ಪ್ರಯತ್ನಿಸುವ ಸರಕಾರ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಎಂದು ಸರಕಾರಕ್ಕೆ ಕಿವಿ ಮಾತು ಹೇಳಿದರು.
ಸರಕಾರಿ ನೌಕರರ ಮೇಲಾಗುತ್ತಿರುವ ಅನ್ಯಾಯವನ್ನು ಪ್ರತಿಭಟಿಸಿ ವೀರಶೈವ(ಲಿಂಗಾಯತ) ಸರಕಾರಿ- ಅರೆ ಸರಕಾರಿ ನೌಕರರ ಕಲ್ಯಾಣ ಸಂಘ, ಜಿಲ್ಲಾ ವೀರಶೈವ ಯುವ ವೇದಿಕೆ, ಬಸವ ದಳ, ಅಹಿಂಸಾ ವೇದಿಕೆ ಹಾಗೂ ನಾಕರಿಕ ವೇದಿಕೆಗಳ ಸಂಯುಕ್ತಾಶ್ರಯದಲ್ಲಿ ನಡೆದ ಬೃಹತ್ ಪ್ರತಿಭಟನಾ ಮೆರವಣಿಗೆಯ ನಂತರದ ಸಭೆಯಲ್ಲಿ ಸ್ವಾಮೀಜಿ ಮಾತನಾಡುತ್ತಿದ್ದರು.
ಸಮಾಜಕ್ಕೆ ಅನ್ಯಾಯವಾದಾಗ ಮಠಾಧೀಶರು ಜನರ ಬೆಂಬಲಕ್ಕೆ ನಿಲ್ಲುತ್ತಾರೆ ಎಂದ ಸ್ವಾಮೀಜಿ ವೀರಶೈವ ನೌಕರರ ಮೇಲೆ ಆಗಿರುವ ಅನ್ಯಾಯವನ್ನು ಸರಕಾರ ಸರಿಪಡಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಸರಕಾರವನ್ನು ದಬಾಯಿಸಿದರು.
ಆಳಂದದ ಸಿದ್ಧ ಲಿಂಗ ಶ್ರೀಗಳು, ಗುರುಬೃಹನ್ಮಠದ ಶ್ರೀಗಳು, ನೌಕರರ ಸಂಘದ ಕಾರ್ಯದರ್ಶಿ ರವೀಂದ್ರ ಶಾಬಾದಿ ಕಾರ್ಯಕ್ರಮದಲ್ಲಿ ಮಾತನಾಡಿದರು.
(ಇನ್ಫೋ ವಾರ್ತೆ)