ಅಮೆರಿಕ ಮೇಲೆ ದಾಳಿ : 14ರಂದು ರಾಷ್ಟ್ರವನ್ನುದ್ದೇಶಿಸಿ ಪ್ರಧಾನಿ ಭಾಷಣ
ನವದೆಹಲಿ : ಅಮೆರಿಕದ ಗಗನಚುಂಬಿ ಕಟ್ಟಡಗಳ ಮೇಲೆ ಮಂಗಳವಾರ ನಡೆದ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರು ಶುಕ್ರವಾರ (ಸೆ.14) ಸಂಜೆ ರೇಡಿಯೋ ಹಾಗೂ ದೂರದರ್ಶನದ ಮೂಲಕ ರಾಷ್ಟ್ರವನ್ನುದ್ದೇಶಿಸಿ ಪ್ರಸಾರ ಭಾಷಣ ಮಾಡಲಿದ್ದಾರೆ.
ಪ್ರಧಾನಿ ವಾಜಪೇಯಿ ಅವರ ನೇತೃತ್ವದಲ್ಲಿ 45 ನಿಮಿಷಗಳಿಗೂ ಹೆಚ್ಚು ಕಾಲ ದೆಹಲಿಯಲ್ಲಿ ಗುರುವಾರ ನಡೆದ ಸುರಕ್ಷಾ ಸಂಪುಟದ ಸಭೆಯ ಬಳಿಕ ಈ ವಿಷಯವನ್ನು ವಿದೇಶಾಂಗ ವ್ಯವಹಾರಗಳ ಸಚಿವ ಜಸ್ವಂತ್ಸಿಂಗ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ಈ ಸಭೆಯಲ್ಲಿ ಬದಲಾದ ಸನ್ನಿವೇಶದಲ್ಲಿ ಅಂತಾರಾಷ್ಟ್ರೀಯ ವಿಧ್ಯಮಾನ ಹಾಗೂ ದೇಶದ ಸುರಕ್ಷತೆಯ ಬಗ್ಗೆ ಚರ್ಚಿಸಲಾಯಿತು ಎಂದು ಅವರು ಹೇಳಿದರು. ಅಮೆರಿಕದ ಮೇಲಿನ ದಾಳಿಯ ಹಿನ್ನೆಲೆಯಲ್ಲಿ ಆಗುತ್ತಿರುವ ಬೆಲೆ ಏರಿಕೆ ಕುರಿತಂತೆ ಹಾಗೂ ದೇಶದ ಆರ್ಥಿಕ ವಿಷಯಗಳ ಬಗ್ಗೆ ಪರಾಮರ್ಶಿಸಿತು ಎಂದರು.
ಕೇಂದ್ರ ಗೃಹ ಸಚಿವ ಎಲ್.ಕೆ. ಆಡ್ವಾಣಿ, ವಿದೇಶಾಂಗ ಕಾರ್ಯದರ್ಶಿ ಚೋಕಿಲಾ ಅಯ್ಯರ್, ವಾಯುಪಡೆ ಮುಖ್ಯಸ್ಥ ಎ.ವೈ. ಟಿಫ್ನಿಸ್ ಮೊದಲಾದವರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.
(ಪಿಟಿಐ)