ಕಾವೇರಿ: ಪ್ರಧಾನಿ ಬಳಿಗೆ ಹೋಗಲಿದೆ ಕರ್ನಾಟಕದ ಸರ್ವಪಕ್ಷ ನಿಯೋಗ
ಬೆಂಗಳೂರು : ಕರ್ನಾಟಕ ಭೀಕರ ಬರ ಪರಿಸ್ಥಿತಿ ಅನುಭವಿಸುತ್ತಿರುವಾಗ ತಮಿಳುನಾಡಿಗೆ ಕಾವೇರಿಯಿಂದ ನೀರು ಹರಿಸಲು ಸಾಧ್ಯವೇ ಇಲ್ಲ ಎಂಬ ನಿರ್ಧಾರವನ್ನು ಗುರುವಾರ ಬೆಳಗ್ಗೆ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ನೇತೃತ್ವದಲ್ಲಿ ವಿಧಾನಸೌಧದಲ್ಲಿ ನಡೆದ ಸರ್ವಪಕ್ಷ ನಾಯಕರ ಸಭೆಯಲ್ಲಿ ಕೈಗೊಳ್ಳಲಾಗಿದೆ.
ಈ ಸಂಬಂಧ ಕರ್ನಾಟಕದ ಅಸಹಾಯಕತೆಯನ್ನು ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ವಿವರಿಸಲು ಕರ್ನಾಟಕದ ಸರ್ವಪಕ್ಷ ನಾಯಕರ ನಿಯೋಗವನ್ನು ದೆಹಲಿಗೆ ಕೊಂಡೊಯ್ಯುವ ಬಗ್ಗೆ ಕೂಡ ನಿರ್ಧರಿಸಲಾಗಿದೆ. ಮುಖ್ಯಮಂತ್ರಿ ಕೃಷ್ಣ ನೇತೃತ್ವದ ನಿಯೋಗ ಬಹುತೇಕ ಶನಿವಾರ ಪ್ರಧಾನಿ ಅವರನ್ನು ಭೇಟಿ ಮಾಡಿ, ಕರ್ನಾಟಕದ ಅಸಹಾಯಕತೆಯನ್ನು ಮನವರಿಕೆ ಮಾಡಿಸುವ ಪ್ರಯತ್ನ ಮಾಡಲಿದೆ.
ಪ್ರಧಾನಿ ಅವರನ್ನು ಭೇಟಿ ಮಾಡುವ ಸಲುವಾಗಿಯೇ ಕರಡೊಂದನ್ನು ಸಿದ್ಧಪಡಿಸಲು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಡಿ.ಬಿ. ಚಂದ್ರೇಗೌಡ ಅವರ ನೇತೃತ್ವದಲ್ಲಿ ಸರ್ವಪಕ್ಷ ಪ್ರಾತಿನಿಧ್ಯವುಳ್ಳ ಸಮಿತಿಯಾಂದನ್ನು ರಚಿಸಲಾಗಿದೆ. ಶುಕ್ರವಾರ ಈ ಸಮಿತಿ ಬೆಂಗಳೂರಿನಲ್ಲಿ ಸಮಾವೇಶಗೊಳ್ಳಲಿದೆ.
ಗುರುವಾರ ನಡೆದ ಸರ್ವಪಕ್ಷ ನಾಯಕರ ಸಭೆಯ ನಂತರ ಸಚಿವ ಡಿ.ಬಿ. ಚಂದ್ರೇಗೌಡ ಅವರು ಮಾಧ್ಯಮ ಪ್ರತಿನಿಧಿಗಳಿಗೆ ಈ ವಿವರ ನೀಡಿದರು. ರಾಜ್ಯದ ಕಾವೇರಿ ತೀರದ ಜಲಾಶಯಗಳಲ್ಲಿ ಕೇವಲ 69 ಟಿಎಂಸಿ ಅಡಿ ನೀರು ಮಾತ್ರ ಇದ್ದು, ಇದು ಕರ್ನಾಟಕಕ್ಕೇ ಸಾಲದು ಎಂದು ಅವರು ಹೇಳಿದರು.
ಸರ್ವಪಕ್ಷ ಸಭೆಯಲ್ಲಿ ಸಂಯುಕ್ತ ಜನತಾದಳದ ನಾಯಕರನ್ನು ಹೊರತುಪಡಿಸಿ ಮಿಕ್ಕೆಲ್ಲಾ ರಾಜಕೀಯ ಪಕ್ಷಗಳ ನಾಯಕರು, ನೀರಾವರಿ ಇಲಾಖೆಯ ಉನ್ನತಾಧಿಕಾರಿಗಳು ಪಾಲ್ಗೊಂಡಿದ್ದರು.
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...