Get Updates
Get notified of breaking news, exclusive insights, and must-see stories!

ಬೆಂಗಳೂರಿಗರಲ್ಲಿ ಆತಂಕ ಮೂಡಿಸಿದ ಅಮೆರಿಕದ ಆಸ್ಫೋಟ

ಬೆಂಗಳೂರು : ಅಮೆರಿಕದ ವಾಷಿಂಗ್ಟನ್‌, ನ್ಯೂಯಾರ್ಕ್‌ನಲ್ಲಿ ಘಟಿಸಿದ ಭಯೋತ್ಪಾದಕ ದಾಳಿಯ ಸುದ್ದಿ, ಮಂಗಳವಾರ ಹಲವು ಬೆಂಗಳೂರಿಗರ ನಿದ್ದೆ ಗೆಡಿಸಿತು. ರಾಜಧಾನಿಯಲ್ಲಿ ಆತಂಕ ಮನೆ ಮಾಡಿತ್ತು. ತಮ್ಮ ಬಂಧು, ಮಿತ್ರರ ಸ್ಥಿತಿ ಏನಾಗಿದೆಯೋ ಎಂಬ ತವಕ, ಆತಂಕ.

ವಿಶ್ವವೇ ತಲ್ಲಣಗೊಳ್ಳುವಂಥ ಘಟನೆ ನಡೆದದ್ದು ಭಾರತೀಯ ಕಾಲಮಾನದ ರೀತ್ಯ 6-30ರ ಸುಮಾರಿನಲ್ಲೇ ಆದರೂ, ಬೆಂಗಳೂರಿನ ಶೇ.80ರಷ್ಟು ಮಂದಿಗೆ ಈ ವಿಷಯ ತಿಳಿದದ್ದು ರಾತ್ರಿ 9-30ರ ನಂತರವೇ. ಮಂಗಳವಾರ ಬೆಳಗ್ಗೆ ಸುಮಾರು 11 ಗಂಟೆಗೆ ಕೈಕೊಟ್ಟ ವಿದ್ಯುತ್‌ ಮತ್ತೆ ಪ್ರತ್ಯಕ್ಷವಾದದ್ದು ಸಂಜೆ 5-30ರ ಹೊತ್ತಿಗೆ. ಆದರೂ, ವಿದ್ಯುತ್‌ ಕಣ್ಣಾಮುಚ್ಚಾಲೆ ನಡೆದೇ ಇತ್ತು.

ವಿದ್ಯುತ್‌ ಸರಬರಾಜು ಸರಿಯಾದದ್ದು ರಾತ್ರಿ 9-30ರ ಹೊತ್ತಿಗೆ. ಆಗ ತಮ್ಮ ಮನೆಯ ಟಿ.ವಿ. ಆನ್‌ ಮಾಡಿದವರಿಗೆ ಆಘಾತಕರ ಸುದ್ದಿ ಕಣ್ಣಿಗೆ ಬಿತ್ತು. ಅಮೆರಿಕದ 110 ಅಂತಸ್ತಿನ ಕಟ್ಟಡ ಹತ್ತಿ ಉರಿಯುತ್ತಿತ್ತು. ಪೆಂಟಗಾನ್‌ ನೆಲಕಚ್ಚಿತ್ತು. ಅಮೆರಿಕೆಯನ್ನೆಲ್ಲಾ ಧೂಮವೇ ಆವರಿಸಿತ್ತು.

ಈ ದೃಶ್ಯಗಳನ್ನು ಟಿ.ವಿಯಲ್ಲಿ ಕಂಡೊಡನೆಯೇ ಅಮೆರಿಕೆಯಲ್ಲಿರುವ ತಮ್ಮ ಮಗ, ಮಗಳು, ಸೋದರ, ಸೋದರಿ, ಪತಿಗೆ ಏನಾಗಿದೆಯೋ ಎಂಬ ಆಂತಕ ಅವರ ಬಂಧುಗಳಲ್ಲಿ ಮನೆ ಮಾಡಿತು. ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಅಮೆರಿಕೆಯಲ್ಲಿ ದೂರವಾಣಿ ಸಂಪರ್ಕ ಕಡಿತ ಮಾಡಲಾಗಿದ್ದ ಕಾರಣ ಆತಂಕ ಮತ್ತಷ್ಟು ಹೆಚ್ಚತೊಡಗಿತು.

ಬೆಂಗಳೂರಿನಲ್ಲೇ ಇರುವ ಇತರ ಬಂಧುಗಳ ಮನೆಗೆ ಫೋನ್‌ ಮಾಡಿ, ಅಮೆರಿಕೆಯಲ್ಲಿರುವ ಬಂಧುಗಳ ಬಗ್ಗೆ ವಿಚಾರಿಸುವವರ ಸಂಖ್ಯೆ ಹೆಚ್ಚುತ್ತಲೇ ಇತ್ತು. ಸೈಬರ್‌ ಕೆಫೆಗಳ ಮುಂದೆ ಜನದಟ್ಟಣೆ. ಇ-ಮೇಲ್‌ ಕಳುಹಿಸಲು, ಇಲ್ಲ ಅಮೆರಿಕೆಯಲ್ಲಿರುವ ತಮ್ಮ ಬಂಧುವಿನಿಂದ ಬಂದಿರಬಹುದಾದ ಮೇಲ್‌ನಲ್ಲಿರುವ ಯೋಗಕ್ಷೇಮದ ಒಂದು ಸಾಲನ್ನು ಓದಲು ಮನಸ್ಸು ತವಕಿಸುತ್ತಿತ್ತು.

ಈ ಪ್ರಯತ್ನದಲ್ಲಿ ಹಲವರು ಯಶಸ್ವಿಯಾದರೂ, ಮತ್ತೆ ಕೆಲವರು ಇನ್ನೂ ಸಂಪರ್ಕ ಸಿಗದೆ ಆತಂಕದಲ್ಲೇ ಇದ್ದರು. ವಾಷಿಂಗ್ಟನ್‌, ನ್ಯೂಯಾರ್ಕ್‌ ಪ್ರದೇಶ ಹೊರತು ಪಡಿಸಿ, ಉಳಿದ ಸ್ಥಳದಲ್ಲಿರುವವವರಿಗೆ ದೂರವಾಣಿ ಸಂಪರ್ಕ ಸುಲಭವಾಗಿ ಸಿಕ್ಕಿತಾದರೂ, ವಾಷಿಂಗ್ಟನ್‌ ಡಿ.ಸಿ.ಯಲ್ಲಿರುವ ತಮ್ಮ ಬಂಧುಗಳ ಬಗ್ಗೆ ಮಾಹಿತಿ ತಿಳಿಯಲು ಬೆಂಗಳೂರಿಗರು ಪರಿತಪಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಮಿನಿಸೋಟದಲ್ಲಿರುವ ತಮ್ಮ ಸೋದರಿ ಕ್ಷೇಮವಾಗಿದ್ದಾರೆಯೇ ಎಂದು ತಿಳಿಯಲು ಕೋಣನಕುಂಟೆಯ ಶ್ರೀಮತಿ ಜಾಯ್ಸ್‌ ಪ್ರಕಾಶ್‌ ಫೋನ್‌ಗೆ ಮೊರೆಹೋಗಿದ್ದು ರಾತ್ರಿ 9 ಗಂಟೆಗೇ ಆದರೂ ಅವರಿಗೆ ಸಂಪರ್ಕ ಸಿಕ್ಕಿದ್ದು, ಮಧ್ಯರಾತ್ರಿ 2.30ರಲ್ಲಿ.

ವಾಷಿಂಗ್ಟನ್‌ನಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿರುವ ತಮ್ಮ ಏಕಮಾತ್ರ ಪುತ್ರ ದಿನೇಶ್‌ರಾವ್‌ ಕ್ಷೇಮವಾಗಿದ್ದರೆ ಸಾಕು ಎಂದು ಗಿರಿನಗರದ ಭಾಗೀರಥಿ ರಾಮಚಂದ್ರರಾವ್‌ ಕಂಡಕಂಡ ದೇವರಿಗೆಲ್ಲಾ ಹರಕೆ ಹೊತ್ತರು. ತಮ್ಮ ಮಗನನ್ನು ಸಂಪರ್ಕಿಸಲು ಆಕೆ ಮಾಡಿದ ಪ್ರಯತ್ನವೆಲ್ಲಾ ವಿಫಲವಾಯಿತು. ರಾತ್ರಿ 12.30ರ ಸುಮಾರಿಗೆ ದಿನೇಶಣ್ಣ ಆರೋಗ್ಯವಾಗಿದ್ದಾನೆ. ಮೇಲ್‌ ಕಳಿಸಿದ್ದಾನೆ ಎಂದು ಮುಂಬೈನಲ್ಲಿರುವ ಮಗಳು ಫೋನ್‌ ಮಾಡಿದಾಗಲೇ ಭಾಗೀರಥಮ್ಮ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದು.

ಹೈದರಾಬಾದ್‌ನಿಂದ ಬೆಂಗಳೂರಿನ ಮುನೇಶ್ವರ ಬಡಾವಣೆಯಲ್ಲಿರುವ ಬಂಧುಗಳ ಮನೆಗೆ ಬಂದಿರುವ ನಿವೃತ್ತ ಉಪನ್ಯಾಸಕ ರಾಜಮುಂಡ್ರಿ ಸಿದ್ಧಾರ್ಥ ಅವರಂತೂ ಮೂರು ದಿನಗಳ ಹಿಂದಷ್ಟೇ ರಜೆ ಮುಗಿಸಿಕೊಂಡು ನ್ಯೂಜರ್ಸಿಗೆ ತೆರಳಿದ ತಮ್ಮ ಮಗಳು ಸುಮತಿ ಹೇಗಿದ್ದಾಳೋ ಎಂದು ಪರಿತಪಿಸುತ್ತಿದ್ದರು.

50 ಅಡಿ ರಸ್ತೆಯಲ್ಲಿರುವ ಸೈಬರ್‌ ಕೆಫೆಯಲ್ಲಿ ಅರ್ಧ ಗಂಟೆ ಕಾದು ತಮ್ಮ ಸರದಿ ಬಂದೊಡನೆ ಮೇಲ್‌ ಚೆಕ್‌ ಮಾಡಿದ ಅವರು, ತಮ್ಮ ಮಗಳು ಕ್ಷೇಮವಾಗಿದ್ದಾಳೆ ಎಂದು ಕೂಗುತ್ತಾ ಹೊರಬಂದರು. ಮುದುಡಿ ಹೋಗಿದ್ದ ಅವರ ಮೊಗ ಮರದಗಲ ಅರಳಿತ್ತು. ಅಮೆರಿಕೆಯಲ್ಲಿರುವ ಎಲ್ಲ ಭಾರತೀಯರೂ ಕ್ಷೇಮವಾಗಿರಲಿ ಎನ್ನುತ್ತಾ ಆ ವಯೋವೃದ್ಧರು ಮನೆಯತ್ತ ಹೆಜ್ಜೆ ಹಾಕಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+