ನೀರಾ ಮಾರಾಟ : ಮೈಸೂರಲ್ಲಿ 250ಕ್ಕೂ ಹೆಚ್ಚು ರೈತರ ಬಂಧನ
ಮೈಸೂರು : ನೀರಾ ಮಾರಲು ಅನುಮತಿ ಕೊಡುವಂತೆ ಸರ್ಕಾರವನ್ನು ಒತ್ತಾಯಿಸುವ ಸಲುವಾಗಿ ಕುವೆಂಪು ನಗರದ ಅಬಕಾರಿ ಕಚೇರಿ ಎದುರು ಸೋಮವಾರ ಬಹಿರಂಗವಾಗಿ ನೀರಾ ಮಾರಾಟ ಮಾಡಲು ಪ್ರಯತ್ನಿಸಿದ 250ಕ್ಕೂ ಹೆಚ್ಚು ರೈತರನ್ನು ಪೊಲೀಸರು ಬಂಧಿಸಿದರು.
ಕರ್ನಾಟಕ ರೈತ ಸಂಘದ ಅಧ್ಯಕ್ಷ ಕೆ.ಎಸ್.ಪುಟ್ಟಣ್ಣಯ್ಯ ಹಾಗೂ ಚಿಂತಕ ಪ್ರೊ.ಕೆ. ರಾಮದಾಸ್ ನೀರಾ ಮಾರಾಟ ಬೆಂಬಲಿಗರ ತಂಡದ ಮುಂಚೂಣಿಯಲ್ಲಿದ್ದರು. ಘೋಷಣೆಗಳನ್ನು ಕೂಗುತ್ತಾ, ಕಚೇರಿ ಸುತ್ತ ಜಮಾಯಿಸಿದ ಅಸಂಖ್ಯ ರೈತರು ಪ್ಲಾಸ್ಟಿಕ್ ಬಾಟಲಿ, ಕವರುಗಳಲ್ಲಿ ನೀರಾ ಮಾರಲು ಶುರು ಮಾಡಿದರು.
ಸುಮಾರು ಒಂದೂವರೆ ಫರ್ಲಾಂಗಿನಷ್ಟು ಉದ್ದಕ್ಕೂ ಬಿಗಿ ಪೊಲೀಸ್ ಪಹರೆ ಇತ್ತು. ನೀರಾ ಮಾರಲು ಯತ್ನಿಸಿದವರನ್ನು ಪೊಲೀಸರು ಬಂಧಿಸಿದರು. ರೈತರು 63 ಕೋಟಿ ರುಪಾಯಿ ಹಣವನ್ನು ತೆಂಗು ಬೆಳೆಗೆ ಸುರಿದಿದ್ದಾರೆ. ಬೊಕ್ಕಸಕ್ಕೆ ಪ್ರತಿಶತ 33ರಷ್ಟು ಆದಾಯ ತಂದುಕೊಟ್ಟಿರುವ ಈ ಬೆಳೆಗಾರರ ದುಸ್ಥಿತಿಯನ್ನು ಸರ್ಕಾರ ನಿವಾರಿಸದಿದ್ದಲ್ಲಿ ಜೈಲು ಭರೋ ಚಳವಳಿ ನಡೆಸುವುದಾಗಿ ಪುಟ್ಟಣ್ಣಯ್ಯ ಹೇಳಿದರು.
ಚಿಕ್ಕಮಗಳೂರು ವರದಿ : ಜಿಲ್ಲೆಯ ಸುತ್ತಮುತ್ತಲ ಹಳ್ಳಿಗಳ ತೆಂಗು ಬೆಳೆಗಾರರು ನಗರದಲ್ಲಿ ಸೋಮವಾರ ಯಶಸ್ವಿಯಾಗಿ ನೀರಾ ಮಾರಾಟ ಮಾಡಿದರು. ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಕೋಡಿಹಳ್ಳಿ ಚಂದ್ರಶೇಖರ್ ಇಲ್ಲಿನ ನೀರಾ ಮಾರಾಟ ಚಳವಳಿಯ ನೇತೃತ್ವ ವಹಿಸಿದ್ದರು. ನೀರಾ ಇಳಿಸಿ, ತೆಂಗು ಉಳಿಸಿ ಹೋರಾಟದ ಅಂಗವಾಗಿ ಈ ಮಾರಾಟ ನಡೆಸಲಾಯಿತು.
ಅಬಕಾರಿ ಇಲಾಖೆಯವರು ಗಸ್ತು ತಿರುಗಿದರೂ ಕೂಡ, ನೀರಾ ಮಾರಾಟ ತಡೆಯುವ ಪ್ರಯತ್ನ ಮಾಡಲಿಲ್ಲ. ಪೊಲೀಸರು ಯಾರನ್ನೂ ಬಂಧಿಸಲಿಲ್ಲ. ಅನೇಕರು ನೀರಾ ರುಚಿಯನ್ನು ಯಾವುದೇ ಅಡೆತಡೆಯಿಲ್ಲದೆ ಸವಿದರು.
(ಇನ್ಫೋ ವಾರ್ತೆ)