ಜಮಖಂಡಿ ಸಕ್ಕರೆ ಕಾರ್ಖಾನೆ ದೇಶಕ್ಕರ್ಪಣೆ,ಸೋನಿಯಾ ತುಲಾಭಾರ ರದ್ದು
ಹಿರೇ ಪಡಸಲಗಿ : ವಿಶ್ವ ವ್ಯಾಪಾರ ಸಂಸ್ಥೆ (ಡಬ್ಲ್ಯೂಟಿಓ)ಯ ಹೆಸರಿನಲ್ಲಿ ಕೇಂದ್ರ ಸರ್ಕಾರ ರೈತರಿಗೆ ಅನ್ಯಾಯವೆಸಗುತ್ತಿದೆ. ಒಂದೆಡೆ ಸರ್ಕಾರಿ ಗೋದಾಮುಗಳಲ್ಲಿ ಆಹಾರ ಧಾನ್ಯಗಳು ಕೊಳೆಯುತ್ತಿದ್ದರೆ, ಮತ್ತೊಂದೆಡೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ವಾಜಪೇಯಿ ಸರ್ಕಾರದ ಬೇಜವಾಬ್ದಾರಿತನವನ್ನು ಕಟುವಾಗಿ ಟೀಕಿಸಿದ್ದಾರೆ. ಈ ನಡುವೆ ಹಲವು ವಲಯಗಳಿಂದ ಕೇಳಿಬಂದ ಪ್ರಬಲ ವಿರೋಧದಿಂದ ಸೋನಿಯಾಗಾಂಧಿ ಅವರ ಬೆಳ್ಳಿ ತುಲಾಭಾರ ಕಾರ್ಯಕ್ರಮ ರದ್ದಾಗಿದೆ.
ಉತ್ತರ ಕರ್ನಾಟಕದ ಬಿಜಾಪುರ ಜಿಲ್ಲೆಯ ಜಮಖಂಡಿ ಸಕ್ಕರೆ ಕಾರ್ಖಾನೆಯನ್ನು ಸೋಮವಾರ ರಾಷ್ಟ್ರಕ್ಕೆ ಅರ್ಪಿಸಿದ ನಂತರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಸೋನಿಯಾ ಮಾತನಾಡುತ್ತಿದ್ದರು. ಕೆಲವು ಬರಪೀಡಿತ ಪ್ರದೇಶಗಳಿಗೆ ಭೇಟಿ ಕೊಟ್ಟು ಸಂತ್ರಸ್ತರ ಸಮಸ್ಯೆಗಳನ್ನು ಸಾವಧಾನದಿಂದ ಆಲಿಸಿದ ಸೋನಿಯಾ ನೊಂದವರಿಗೆ ಸಾಂತ್ವನ ಹೇಳಿದರು. ಬರ ಪರಿಹಾರ ಕಾಮಗಾರಿಗಳಿಗೆ ಬಳಸಿಕೊಳ್ಳಲು 10 ಲಕ್ಷ ರುಪಾಯಿಗಳನ್ನು ಸೋನಿಯಾ ದೇಣಿಗೆ ನೀಡಿದರು.
ರಾಜ್ಯ ಸರ್ಕಾರದ ಕ್ರಮಗಳ ಬಗೆಗೆ ಮೇಡಂ ಮೆಚ್ಚುಗೆ
ಗೋಶಾಲೆಗೆ ಭೇಟಿ ನೀಡಿದ ಸೋನಿಯಾ, ಗುಡ್ಡಗಾಡು ಮಹಿಳೆಯರೊಂದಿಗೆ ಮಾತುಕತೆ ನಡೆಸಿದರು. ಕರ್ನಾಟಕದಲ್ಲಿನ ಬರ ಪರಿಸ್ಥಿತಿಯನ್ನು ಅರಿತುಕೊಳ್ಳಲು ಇಲ್ಲಿಗೆ ಆಗಮಿಸಿದ್ದೇನೆ ಎಂದು ಸುದ್ದಿಗಾರರಿಗೆ ತಿಳಿಸಿದ ಸೋನಿಯಾ, ರಾಜ್ಯ ಸರ್ಕಾರ ಕೈಗೊಂಡಿರುವ ಬರ ಪರಿಹಾರ ಕಾಮಗಾರಿಗಳ ಕುರಿತು ಸಂತಸ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿನ ಬರ ಪರಿಹಾರ ಸ್ಥಿತಿಯನ್ನು ನಿಭಾಯಿಸಲು ಕೇಂದ್ರದಿಂದ ಗರಿಷ್ಠ ಪ್ರಮಾಣದ ನೆರವು ದೊರೆಯುವಂತೆ ತಾವು ಶ್ರಮ ಮೀರಿ ಪ್ರಯತ್ನಿಸುವುದಾಗಿ ಸೋನಿಯಾ ಆಶ್ವಾಸನೆ ನೀಡಿದರು. ಬರದ ನಡುವೆಯೂ ಹಬ್ಬದ ವಾತಾವರಣ ಮೂಡಿದ್ದ ಹೊರಟ್ಟಿ ಗ್ರಾಮದಲ್ಲಿ ಸಾವಿರಾರು ಜನರು ಸಾಲಿನಲ್ಲಿ ನಿಂತು ಸೋನಿಯಾ ಅವರಿಗೆ ಸ್ವಾಗತ ಕೋರಿದರು. ಮುಖ್ಯಮಂತ್ರಿ ಎಸ್.ಎಂ.ಕೃಷ್ಣ , ಕೆಪಿಸಿಸಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ , ಹಾಗೂ ಸಂಪುಟದ ಸಚಿವರು, ಪಕ್ಷದ ಮುಖಂಡರು ಸೋನಿಯಾ ಭೇಟಿ ಸಂದರ್ಭದಲ್ಲಿ ಹಾಜರಿದ್ದರು.
(ಪಿಟಿಐ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...