ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್‌. ಎಂ. ಕೃಷ್ಣ ಸಂಪುಟ ಸದಸ್ಯರ ಖಾತೆಗಳಲ್ಲಿ ಬದಲಾವಣೆ

By Staff
|
Google Oneindia Kannada News

ಬೆಂಗಳೂರು : ಮುಖ್ಯಮಂತ್ರಿ ಎಸ್‌. ಎಂ. ಕೃಷ್ಣ ಅವರು ತಮ್ಮ ಸಚಿವ ಸಂಪುಟದ ಇಬ್ಬರು ಮತ್ತು ಆರು ಮಂದಿ ರಾಜ್ಯ ಸಚಿವರ ಖಾತೆಯಲ್ಲಿ ಮಾರ್ಪಾಟು ಮಾಡಿದ್ದು ರಾಜ್ಯಪಾಲರಾದ ವಿ.ಎಸ್‌. ರಮಾದೇವಿಯವರು ಗುರುವಾರ ಈ ಕುರಿತ ಆದೇಶ ಹೊರಡಿಸಿದ್ದಾರೆ.

ವಾರ್ತಾ ಸಚಿವರಾಗಿದ್ದ ಪ್ರೊ.ಬಿ.ಕೆ. ಚಂದ್ರಶೇಖರ್‌ ಅವರು ಇನ್ನು ಮುಂದೆ ಮಾಹಿತಿ ತಂತ್ರಜ್ಞಾನ ಖಾತೆಯನ್ನು ನೋಡಿಕೊಳ್ಳಲಿದ್ದರೆ, ಹಣಕಾಸು ಖಾತೆ ರಾಜ್ಯ ಸಚಿವರಾಗಿದ್ದ ಎಂ.ಶಿವಣ್ಣ ಅವರು ವಾರ್ತಾ ಇಲಾಖೆ ನೋಡಿಕೊಳ್ಳಲಿದ್ದಾರೆ. ಹಣಕಾಸು ಖಾತೆ ಯನ್ನು ಮುಖ್ಯಮಂತ್ರಿ ತಮ್ಮ ಬಳಿಯೇ ಇಟ್ಟುಕೊಂಡಿದ್ದು, ಮಾಹಿತಿ ತಂತ್ರಜ್ಞಾನ ಸಚಿವರಾಗಿದ್ದ ಎಂ.ಎಂ.ನಾಣಯ್ಯ ಅವರಿಗೆ ಅಬ್ಕಾರಿ ಖಾತೆ ನೀಡಲಾಗಿದೆ.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಡಿ.ಬಿ.ಚಂದ್ರೇಗೌಡ ಅವರಿಗೆ ಹೆಚ್ಚುವರಿಯಾಗಿ ನಗರ ಮೂಲಭೂತ ಸೌಲಭ್ಯಗಳ ಇಲಾಖೆ ಹಾಗೂ ಹಣಕಾಸು ಅಭಿವೃದ್ಧಿ ನಿಗಮವನ್ನು , ನಗರಾಭಿವೃದ್ಧಿ ಸಚಿವ ಬಿ.ಬಿ.ಚಿಮ್ಮನಕಟ್ಟಿ ಅವರಿಗೆ ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಲಿ ಮತ್ತು ನಗರ ಯೋಜನಾ ಇಲಾಖೆಯನ್ನು ಹೆಚ್ಚುವರಿ ಯಾಗಿ ನೀಡಲಾಗಿದೆ.

ಯೋಜನಾ ಖಾತೆ ಸಚಿವರಾಗಿರುವ ಸುಮಾ ವಸಂತ್‌ಗೆ ಸಚಿವ ಬಾಬುರಾವ್‌ ಚಿಂಚನ ಸೂರ್‌ ಬಳಿ ಇದ್ದ ಮುಜರಾಯಿ ಇಲಾಖೆಯನ್ನು ಹೆಚ್ಚುವರಿಯಾಗಿ ವಹಿಸಲಾಗಿದ್ದರೆ, ಬಾಬುರಾವ್‌ ಚಿಂಚನ ಸೂರ್‌ ಬಳಿ ಸಣ್ಣ ಉಳಿತಾಯ, ಲಾಟರಿ ಹಾಗೂ ವಿಮೆ ಇಲಾಖೆಗಳ ಜವಾಬ್ದಾರಿ ಮಾತ್ರ ಉಳಿದುಕೊಂಡಿದೆ.

ಇಂಧನ ಖಾತೆ ರಾಜ್ಯ ಸಚಿವರಾಗಿದ್ದ ವೀರ ಕುಮಾರ್‌ ಪಾಟೀಲ್‌ ಅವರು ಆ ಖಾತೆಯನ್ನು ಸ್ವತಂತ್ರವಾಗಿ ನಿರ್ವಹಿಸಲಿದ್ದಾರೆ. ಅಲ್ಲದೆ ಆರು ಮಂದಿ ರಾಜ್ಯ ಸಚಿವರು ಇನ್ನು ಮುಂದೆ ಸ್ವತಂತ್ರವಾಗಿ ತಮ್ಮ ಖಾತೆಗಳನ್ನು ನಿರ್ವಹಿಸಲು ಅನುಮತಿ ನೀಡಲಾಗಿದೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X