ಶನಿವಾರದಿಂದ ಬರಪೀಡಿತ ಉತ್ತರ ಕರ್ನಾಟಕದಲ್ಲಿ ಕೃಷ್ಣ ಪ್ರವಾಸ
ಬೆಂಗಳೂರು : ಹಾವೇರಿ, ಗದಗ, ಬಾಗಲಕೋಟೆ ಸೇರಿದಂತೆ ಉತ್ತರ ಕರ್ನಾಟಕದ ಬರಪೀಡಿತ ಪ್ರದೇಶಗಳಿಗೆ ರಾಜ್ಯದ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಭೇಟಿ ನೀಡುತ್ತಿದ್ದಾರೆ. ಈ ಸಂಬಂಧ ಶನಿವಾರದಿಂದ ಅವರು ಮೂರು ದಿನಗಳ ಪ್ರವಾಸ ಕೈಗೊಳ್ಳಲಿದ್ದಾರೆ.
ಶನಿವಾರ ಬೆಳಗ್ಗೆ 9 ಗಂಟೆಗೆ ಬೆಂಗಳೂರಿನಿಂದ ಹೊರಟು 11.25ಕ್ಕೆ ಹಾವೇರಿ ತಲುಪುವ ಅವರು ಅಲ್ಲಿನ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವರು. ಆನಂತರ ಜಿಲ್ಲೆಯ ಶಾಸಕರು ಹಾಗೂ ಅಧಿಕಾರಿಗಳೊಂದಿಗೆ ಬರ ಪರಿಹಾರ ಕಾಮಗಾರಿಗಳ ಬಗ್ಗೆ ಮಾತುಕತೆ ನಡೆಸುವರು.
ಅಲ್ಲಿಂದ 3.30ಕ್ಕೆ ಧಾರವಾಡಕ್ಕೆ ಬರುವ ಮುಖ್ಯಮಂತ್ರಿಗಳು ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಶಾಸಕರು, ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವರು. ರಾತ್ರಿ ಧಾರವಾಡದಲ್ಲೇ ವಿಶ್ರಾಂತಿ ಪಡೆದು ಭಾನುವಾರ ಬೆಳಗ್ಗೆ 9ಕ್ಕೆ ಗದಗದತ್ತ ಪ್ರಯಾಣ ಬೆಳೆಸುವರು.
ಮಧ್ಯಾಹ್ನ ಅಲ್ಲಿಂದ ಬೆಳಗಾವಿಗೆ ತೆರಳಿ, ಅಲ್ಲಿನ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಖುದ್ದು ಪರಿಶೀಲನೆ ನಡೆಸುವರು. ರಾತ್ರಿ ಅಲ್ಲೇ ತಂಗುವ ಕೃಷ್ಣ, ಸೋಮವಾರ ಬೆಳಗ್ಗೆ 10-15ಕ್ಕೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸುವರು.
ನಂತರ ಸೋನಿಯಾ ಅವರೊಂದಿಗೆ ಬಿಜಾಪುರ ಜಿಲ್ಲೆಗೆ ಬೇಟಿ ನೀಡಿ, 12.45ಕ್ಕೆ ಹಿರೇಪಡಸಲಗಿಯ ಜಮಖಂಡಿ ಸಕ್ಕರೆ ಕಾರ್ಖಾನೆ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು. ಮಧ್ಯಾಹ್ನ 3 ಗಂಟೆಗೆ ಬೆಳಗಾವಿಗೆ ಹಿಂತಿರುಗಿ 3.45ಕ್ಕೆ ಸೋನಿಯಾ ಗಾಂಧಿ ಅವರಿಗೆ ಬೀಳ್ಕೊಡುವರು ಎಂದು ಮುಖ್ಯಮಂತ್ರಿಗಳ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.
ವಾರ್ತಾ
ಸಂಚಯ
ಮುಖಪುಟ
/
ಕೃಷ್ಣಗಾರುಡಿಯ
ಕನ್ನಡಿ