ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತ.ನಾಡಿಗೆ ನೀರು ಬಿಡಲು ಸಾಧ್ಯವೇ ಇಲ್ಲ : ಕಾವೇರಿಸಭೆಯಲ್ಲಿ ಕರ್ನಾಟಕ

By Staff
|
Google Oneindia Kannada News

ನವದೆಹಲಿ : ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಬಾರದೆ ಬರ ಪರಿಸ್ಥಿತಿ ಇರುವ ಹಿನ್ನೆಲೆಯಲ್ಲಿ ತಮಿಳುನಾಡಿನ ಕುರುವೈ ಬೆಳೆಗೆ ನೀರು ಹರಿಸಲು ಸಾಧ್ಯವಾಗುತ್ತಿಲ್ಲ ಎಂದು ಕರ್ನಾಟಕ ತನ್ನ ಅಸಹಾಯಕತೆಯನ್ನು ವ್ಯಕ್ತಪಡಿಸಿದೆ. ಇದರಿಂದಾಗಿ ದೆಹಲಿಯಲ್ಲಿ ನಡೆದ ಬಹು ನಿರೀಕ್ಷಿತ ಕಾವೇರಿ ಉಸ್ತುವಾರಿ ಸಮಿತಿ ಸಭೆ ವಿಫಲವಾಗಿದೆ.

ಕಾವೇರಿ ನ್ಯಾಯಮಂಡಳಿಯ ಆದೇಶಕ್ಕನುಗುಣವಾಗಿ ಕರ್ನಾಟಕ ರಾಜ್ಯವು ನೀರು ಬಿಟ್ಟಿಲ್ಲ ಎಂದು ತಮಿಳುನಾಡು ಸರಕಾರ ತಕರಾರು ತೆಗೆದಿತ್ತು. ಕೂಡಲೇ 17 ಟಿ.ಎಂ.ಸಿ. ನೀರು ಬಿಡುವಂತೆ ಆಗ್ರಹಿಸಿ, ಜಯಲಲಿತಾ ಮುಖ್ಯಮಂತ್ರಿ ಕೃಷ್ಣ ಅವರಿಗೂ ಪತ್ರ ಬರೆದಿದ್ದರು. ಕೇಂದ್ರ ಜಲ ಆಯೋಗದ ನಿಯೋಗ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ಕಾವೇರಿ ಕಣಿವೆಯಲ್ಲಿ ಅಧ್ಯಯನ ನಡೆಸಿ ವರದಿಯನ್ನೂ ಸಲ್ಲಿಸಿತ್ತು.

ಗುರುವಾರ ಮಧ್ಯಾಹ್ನ ಕೇಂದ್ರ ಜಲ ಸಂಪನ್ಮೂಲ ಖಾತೆ ಕಾರ್ಯದರ್ಶಿ ಬಿ.ಎನ್‌. ನವ್ಲವಾಲಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕರ್ನಾಟಕದ ಮುಖ್ಯ ಕಾರ್ಯದರ್ಶಿ ಥೆರೇಸಾ ಭಟ್ಟಾಚಾರ್ಯ ರಾಜ್ಯದ ಪರಿಸ್ಥಿತಿಯನ್ನು ವಿವರಿಸಿ, ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಎಂದು ವಿವರಿಸಿದರು.

ಕರ್ನಾಟಕ ಹಿಂದೆಂದೂ ಕಾಣದ ಬರ ಪರಿಸ್ಥಿತಿ ಎದುರಿಸುತ್ತಿದೆ. ಕಾವೇರಿ ಪಾತ್ರದ 48 ತಾಲೂಕಗಳ ಪೈಕಿ 45 ತಾಲೂಕುಗಳ ಬರದ ದವಡೆಗೆ ಸಿಲುಕಿವೆ. ರಾಜ್ಯದ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಿದೆ. ಕಳೆದ 5 ವರ್ಷಗಳಲ್ಲಿ ಈ ಬಾರಿ ಭಾರಿ ನೀರಿನ ಕೊರತೆ ಕಂಡು ಬಂದಿದೆ. ಕಳೆದ ವರ್ಷ ನಿಗದಿತ 205 ಟಿ.ಎಂ.ಸಿ. ನೀರಿಗೆ ಬದಲಾಗಿ 300 ಟಿ.ಎಂ.ಸಿ.ನೀರು ಬಿಡಲಾಗಿತ್ತು ಎಂದು ಅವರು ಸಭೆಗೆ ತಿಳಿಸಿದರು.

ಪರಿಸ್ಥಿತಿ ಪರಿಶೀಲನೆ : ತಮಿಳುನಾಡಿನ ಕುರುವೈ ಬೆಳೆ ನೀರಿಲ್ಲದೆ ಒಣಗುತ್ತಿರುವ ಕಾರಣ ಕೂಡಲೇ ನೀರು ಬಿಡಬೇಕು ಎಂದು ತಮಿಳುನಾಡು ಮುಖ್ಯಕಾರ್ಯದರ್ಶಿ ಶಂಕರ್‌ ಸಭೆಯಲ್ಲಿ ಪಟ್ಟು ಹಿಡಿದರು. ಪ್ರತಿದಿನ 1 ಟಿ.ಎಂ.ಸಿ. ನೀರು ಬಿಡುವಂತೆ ಒತ್ತಾಯಿಸಿದರು.

ಆದರೆ, ಕರ್ನಾಟಕ ನೀರು ಬಿಡಲು ಸಾಧ್ಯವೇ ಇಲ್ಲ ಎಂದ ಹಿನ್ನೆಲೆಯಲ್ಲಿ 5 ದಿನಗಳ ಕಾಲ ಪರಿಸ್ಥಿತಿ ಪರಿಶೀಲಿಸಿ, ಆನಂತರ ನಿರ್ಧಾರ ಕೈಗೊಳ್ಳಲು ಸಮಿತಿ ನಿರ್ಧರಿಸಿತು. ಕಾವೇರಿ ನ್ಯಾಯಮಂಡಳಿ ಐತೀರ್ಪಿನ ಪ್ರಕಾರ ಆಗಸ್ಟ್‌ ಅಂತ್ಯಕ್ಕೆ ಕರ್ನಾಟಕ ಮೆಟ್ಟೂರು ಜಲಾಶಯಕ್ಕೆ 107.64 ಟಿ.ಎಂ.ಸಿ. ನೀರು ಬಿಡಬೇಕು. ಆದರೆ, ಈ ಅವಧಿಯಲ್ಲಿ 62 ಟಿ.ಎಂ.ಸಿ. ನೀರು ಮಾತ್ರ ಹರಿಸಲಾಗಿದೆ ಎಂದು ತಮಿಳುವಾಡು ಆಕ್ಷೇಪಿಸಿತು.

ನೀರಾವರಿ ವರ್ಷದ ಆರಂಭದಲ್ಲಿ ಮೆಟ್ಟೂರು ಜಲಾಶಯದಲ್ಲಿ 63.5 ಟಿ.ಎಂ.ಸಿ. ನೀರಿತ್ತು. ಕರ್ನಾಟಕ 62 ಟಿ.ಎಂ.ಸಿ. ನೀರು ಬಿಟ್ಟಿದೆ. ಅಂದರೆ ಜಲಾಶಯದಲ್ಲಿ ಈ ವರ್ಷ ಸುಮಾರು 125 ಟಿ.ಎಂ.ಸಿ. ನೀರು ಸಂಗ್ರಹವಾಗಿದೆ. ಇದು 107 ಟಿಎಂಸಿ ನೀರಿನ ಪ್ರಮಾಣಕ್ಕಿಂತ ಹೆಚ್ಚು ಎಂದು ಕರ್ನಾಟಕ ವಾದಿಸಿತು.

ಸಭೆಯಲ್ಲಿ ಕರ್ನಾಟಕ, ತಮಿಳುನಾಡು, ಪಾಂಡಿಚೆರಿಯ ಮುಖ್ಯ ಕಾರ್ಯದರ್ಶಿಗಳು ಹಾಗೂ ಕೇರಳದ ಮುಖ್ಯ ಎಂಜಿನಿಯರ್‌ ಪಾಲ್ಗೊಂಡಿದ್ದರು. 5 ದಿನಗಳ ನಂತರ ಏನು ತೀರ್ಮಾನ ಕೈಗೊಳ್ಳಲಾಗುತ್ತದೆ ಎಂಬುದನ್ನು ಕಾದು ನೋಡಬೇಕು.

ವಾರ್ತಾ ಸಂಚಯ:
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X