ಮೈಸೂರು ದಸರಾ ಮೆರವಣಿಗೆ ರದ್ದು : ಸಂಸ್ಕೃತಿ ಸಚಿವರ ಇಂಗಿತ
ಮೈಸೂರು : ಬರದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಹಲವು ಉತ್ಸವಗಳನ್ನು ರದ್ದು ಮಾಡಿದೆ. ದಸರೆಯನ್ನು ಸರಳವಾಗಿ ಆಚರಿಸಲು ನಿರ್ಧರಿಸಿದೆ. ಈಗ ದಸರಾ ಮೆರವಣಿಗಯನ್ನು ಕೂಡ ರದ್ದು ಮಾಡುವ ಬಗ್ಗೆ ಗಂಭೀರವಾಗಿ ಚಿಂತಿಸಲಾಗುತ್ತಿದೆ. ಈ ಸಂಬಂಧ ದಸರಾ ಸಮಿತಿ ಸಭೆಗೆ ಮೊದಲೇ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ರಾಜ್ಯದ ಸಂಸ್ಕೃತಿ ಖಾತೆ ಸಚಿವೆ ರಾಣಿ ಸತೀಶ್ ತಿಳಿಸಿದ್ದಾರೆ.
ಇಲ್ಲಿನ ರಂಗಾಯಣದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಬರದಿಂದ ರಾಜ್ಯದ ಜನತೆ ಕಂಗಾಲಾಗಿರುವ ಹಿನ್ನೆಲೆಯಲ್ಲಿ ದಸರಾ ಆಚರಣೆ ಬೇಡ ಎನ್ನುವ ಅಭಿಪ್ರಾಯವನ್ನು ದಸರಾ ಸಮಿತಿಯ ಮೊದಲ ಸಭೆಯಲ್ಲೇ ತಾವು ಮಂಡಿಸಿದ್ದಾಗಿ ಹೇಳಿದರು.
ಆದರೆ, ನಾಡಿನ ಸಂಸ್ಕೃತಿಯ ಸಂಕೇತವಾದ ಈ ಉತ್ಸವವನ್ನು ಸರಳವಾಗಿ ಆಚರಿಸಲು ಸಭೆ ನಿರ್ಧಸಿತು. ಹೀಗಾಗಿ ಈ ಬಾರಿಯ ದಸರಾ ಉತ್ಸವಕ್ಕೆ 30 ಲಕ್ಷ ರುಪಾಯಿಗಳನ್ನು ಮಾತ್ರ ಬಿಡುಗಡೆ ಮಾಡಲು ನಿರ್ಧರಿಸಲಾಯಿತು. ಕಳೆದ ಬಾರಿ 75 ಲಕ್ಷ ನೀಡಲಾಗಿತ್ತು ಎಂದು ಅವರು ಹೇಳಿದರು.
ದಸರಾ ಆಚರಣೆಯ ಉಪಸಮಿತಿಗಳ ಸಂಖ್ಯೆಯನ್ನೂ ಐದಕ್ಕೆ ಇಳಿಸಲಾಗಿದೆ. ಈಗಾಗಲೇ ದಸರಾ ಸಮಿತಿಗೆ 20 ಲಕ್ಷ ರುಪಾಯಿ ಬಿಡುಗಡೆ ಮಾಡಲಾಗಿದೆ. ದಸರಾ ಮೆರವಣಿಗೆಯ ಅಂಬಾರಿ ಮತ್ತು ಅಂಬಾರಿ ವಿಮೆಗೆ 8 ಲಕ್ಷ ರುಪಾಯಿ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಕವಿಗೋಷ್ಠಿಗೆ 6 ಲಕ್ಷ ರುಪಾಯಿ, ಮೆರವಣಿಗೆ, ಸ್ತಬ್ಧ ಚಿತ್ರ ಮತ್ತು ದೀಪಾಲಂಕಾರ ಸಮಿತಿಗೆ 8 ಲಕ್ಷ ರುಪಾಯಿ, ಕ್ರೀಡಾ ಸಮಿತಿಗೆ 5 ಲಕ್ಷ, ಕುಸ್ತಿ ಸಮಿತಿಗೆ 3 ಲಕ್ಷ ಹಾಗೂ ವಿವಿಧ ಗಣ್ಯರು ಮತ್ತು ಕಲಾವಿದರ ವಸತಿ ಸೌಕರ್ಯಕ್ಕಾಗಿ 75 ಸಾವಿರ ರುಪಾಯಿ ಬಿಡುಗೆಡ ಮಾಡಲಾಗುವುದು ಎಂದರು.
ಈ ಬಾರಿ ಬರದ ಹಿನ್ನೆಲೆಯಲ್ಲಿ ಈ ಬಾರಿ ದಸರಾ ಕ್ರೀಡಾಕೂಟವನ್ನೂ ಕೈಬಿಡಲಾಗಿ ಎಂದು ಪ್ರಕಟಿಸಿದ್ದರೂ 5 ಲಕ್ಷ ಬಿಡುಗಡೆ ಮಾಡಿದ್ದೇಕೆ ಎಂಬ ಪ್ರಶ್ನೆಗೆ ಸಚಿವರ ಬಳಿ ಉತ್ತರ ಇರಲಿಲ್ಲ. ಆದರೆ, ಸ್ತಬ್ಧ ಚಿತ್ರಗಳಿಗೆ ವಿವಿಧ ಇಲಾಖೆಗಳು ಮಾಡುವ ವೆಚ್ಚವನ್ನು ನಿಯಂತ್ರಿಸುವ ಬಗ್ಗೆ ತಾವು ಮುಂದಿನ ಸಭೆಯಲ್ಲಿ ಚರ್ಚಿಸುವುದಾಗಿ ಅವರು ಹೇಳಿದರು.
ಈ ಸಂದರ್ಭದಲ್ಲಿ ಮೈಸೂರು ವಿಭಾಗಾಧಿಕಾರಿಗಳಾದ ಎಚ್. ಭಾಸ್ಕರ್, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಜಯರಾಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.
ಮುಖಪುಟ / ಇವತ್ತು... ಈ ಹೊತ್ತು...