ಕ್ಯಾರಿಓವರ್ ಪದ್ಧತಿ ರದ್ದತಿಗೆ ಬೆಂಗಳೂರು ವಿಶ್ವ ವಿದ್ಯಾಲಯ ನಿರ್ಧಾರ
ಬೆಂಗಳೂರು : ಬೆಂಗಳೂರು ವಿಶ್ವ ವಿದ್ಯಾಲಯದ ಪದವಿ ತರಗತಿಗಳಲ್ಲಿ ಕ್ಯಾರಿ ಓವರ್ ಪದ್ಧತಿಯನ್ನು ರದ್ದು ಪಡಿಸಲು ನಿರ್ಧರಿಸಲಾಗಿದೆ.
ಈ ನಿರ್ಧಾರದ ಪ್ರಕಾರ ಮುಂದಿನ ಶೈಕ್ಷಣಿಕ ವರ್ಷದಿಂದ ಪದವಿಯ ಪ್ರಥಮ ಪದವಿಯಲ್ಲಿ ಕನಿಷ್ಠ ಎರಡು ವಿಷಯಗಳಲ್ಲಿ ತೇರ್ಗಡೆ ಹೊಂದಿದವರು ದ್ವಿತೀಯ ಪದವಿಗೆ ಹಾಗೂ ಪ್ರಥಮ ಪದವಿಯ ಎಲ್ಲ ವಿಷಯಗಳಲ್ಲಿ ತೇರ್ಗಡೆ ಹೊಂದಿದವರು ಅಂತಿಮ ಪದವಿಗೆ ಪ್ರವೇಶ ಪಡೆಯುತ್ತಾರೆ.
ಬುಧವಾರ, ಬೆಂಗಳೂರು ವಿವಿಯ ಶೈಕ್ಷಣಿಕ ಪರಿಷತ್ತಿನ ಸಾಮಾನ್ಯ ಸಭೆಯಲ್ಲಿ ಮಂಡಿಸಿದ ಈ ನಿರ್ಣಯಕ್ಕೆ ಬಹುಮತದ ಒಪ್ಪಿಗೆ ದೊರಕಿತು. ಈ ಪದ್ಧತಿಯು ಮುಂದಿನ ವರ್ಷ ಪ್ರಥಮ ಪದವಿಗೆ ಸೇರುವ ವಿದ್ಯಾರ್ಥಿಗಳಿಗೆ ಅನ್ವಯವಾಗುತ್ತದೆ.
ನಿರ್ಣಯ ಮಂಡಿಸಿದ ಸದಸ್ಯ ಎಂ.ಬಸವರಾಜಯ್ಯ ಅವರು, ಪ್ರಸ್ತುತ ಜಾರಿಯಲ್ಲಿರುವ ಕ್ಯಾಪರಿಓವರ್ ಪದ್ಧತಿಯ ಪ್ರಕಾರ ವಿದ್ಯಾರ್ಥಿಯು ಯಾವ ವರ್ಷದಲ್ಲಿ ಎಷ್ಟೇ ವಿಷಯಗಳನ್ನು ಬಾಕಿ ಉಳಿಸಿಕೊಂಡಿದ್ದರೂ ಅಂತಿಮ ಪದವಿಯವರೆಗೆ ಯಾವುದೇ ಕಡಿವಾಣವಿಲ್ಲದೇ ಮುಂದುವರೆಯಬಹುದಾಗಿತ್ತು. ಇದರಿಂದ ಬಹುತೇಕ ವಿದ್ಯಾರ್ಥಿಗಳು ಅಂತಿಮ ಪದವಿಯಲ್ಲಿ ಹೆಚ್ಚು ವಿಷಯಗಳನ್ನು ಬಾಕಿ ಉಳಿಸಿಕೊಂಡು ಮಾನಸಿಕವಾಗಿ ತೊಳಲಾಡುತ್ತಾರೆ. ಹೊಸ ಪದ್ಧತಿಯಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
(ಇನ್ಫೋ ವಾರ್ತೆ)