ಏರ್ಪೋರ್ಟ್: ಸೀಮನ್- ಝೂರಿಚ್ಗೆ ಒಪ್ಪಂದಕ್ಕೆ ಸೆಪ್ಟೆಂಬರ್ ಗಡುವು
ಬೆಂಗಳೂರು : ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಕುರಿತಂತೆ ಕರ್ನಾಟಕ ಸರ್ಕಾರದೊಡನೆ ಒಪ್ಪಂದ ಮಾಡಿಕೊಳ್ಳಲು ಲಾರ್ಸೆನ್ ಅಂಡ್ ಟುಬ್ರೊ ನೇತೃತ್ವದ ಸೀಮನ್- ಝೂರಿಚ್ ಒಕ್ಕೂಟಕ್ಕೆ ಸೆಪ್ಟೆಂಬರ್ ಅಂತಿಮ ಗಡುವಾಗಿದೆ.
ವಿಮಾನ ನಿಲ್ದಾಣ ಸಮಿತಿಯ ಚರ್ಚೆ ನಂತರ ಬುಧವಾರ ಸುದ್ದಿಗಾರರೊಡನೆ ಮಾತಾಡುತ್ತಿದ್ದ ರಾಜ್ಯ ಗೃಹ ಹಾಗೂ ನಾಗರಿಕ ವಿಮಾನ ಯಾನ ಸಚಿವ ಎಂ.ಮಲ್ಲಿಕಾರ್ಜುನ ಖರ್ಗೆ ಈ ವಿಷಯ ತಿಳಿಸಿದರು. ಆಗಸ್ಟ್ ತಿಂಗಳಲ್ಲೇ ಸರ್ಕಾರ ಮತ್ತು ಜಂಟಿ ಸಂಸ್ಥೆಗಳೊಡನೆ ಒಪ್ಪಂದ ಆಗಬೇಕಿತ್ತು. ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಸೆಪ್ಟೆಂಬರ್ ತಿಂಗಳಲ್ಲಿ ಶತಾಯಗತಾಯ ಒಪ್ಪಂದವಾಗಲೇಬೇಕು ಎಂದು ಹೇಳಿದರು.
ಹಣಕಾಸು ಸಂಸ್ಥೆಗಳೊಡನೆ ಚರ್ಚಿಸಿ, ಸಾಕಷ್ಟು ಸಜ್ಜಾಗಬೇಕಿರುವುದರಿಂದ ಒಪ್ಪಂದದ ಗಡುವನ್ನು ವಿಸ್ತರಿಸುವಂತೆ ಸೀಮನ್- ಝೂರಿಚ್ ಕೇಳಿಕೊಂಡಿದ್ದರಿಂದ ಒಡಂಬಡಿಕೆ ಒಂದು ತಿಂಗಳು ತಡವಾಗಿ ಆಗಲಿದೆ. ಪ್ರಸ್ತುತ ಯೋಜನೆಯ ಅಂದಾಜು ವೆಚ್ಚ 1200 ಕೋಟಿಗಳಷ್ಟು ಇದ್ದು, ಅದನ್ನು ಇಳಿಸುವ ಬಗ್ಗೆ ಚಿಂತಿಸಲಾಗುತ್ತಿದೆ. ಪ್ರತಿಶತ 70ರಷ್ಟು ವಿಮಾನ ಪ್ರಯಾಣಿಕರು ಅಂತರರಾಷ್ಟ್ರೀಯ ಜಾಗೆಗಳಿಗೆ ನೇರ ಯಾನ ಮಾಡಲು ಕಾತುರರಾಗಿದ್ದಾರೆ. ಜರ್ಮನಿಯ ಲುಫ್ತಾನ್ಸಾ ಏರ್ವೇಸ್ ಬೆಂಗಳೂರಿಂದ ಫ್ರಾಂಕ್ಫರ್ಟ್ಗೆ ನೇರ ವಿಮಾನ ಸಂಚಾರ ಪ್ರಾರಂಭಿಸುವುದರಿಂದ ಅಂತರರಾಷ್ಟ್ರೀಯ ವಿಮಾನದ ಸುದ್ದಿಗೆ ಗರಿ ಮೂಡಿದೆ ಎಂದರು.
(ಪಿಟಿಐ)