ರಾಜ್ಯದಲ್ಲಿ ಬರ: ಬುಧವಾರ ಕೇಂದ್ರದ ಪರಿಹಾರ ಗಾತ್ರ ನಿರ್ಧಾರ
ಬೆಂಗಳೂರು: ಕರ್ನಾಟಕ ಹಾಗೂ ಆಂಧ್ರಪ್ರದೇಶ ರಾಜ್ಯಗಳಲ್ಲಿ ತಲೆದೋರಿರುವ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ , ಕೇಂದ್ರ ಕೃಷಿ ಸಚಿವ ಅಜಿತ್ಸಿಂಗ್ ನೇತೃತ್ವದ ಕೇಂದ್ರ ಸಚಿವರ ಸಮನ್ವಯ ಸಮಿತಿ ಪರಿಹಾರ ಕುರಿತಂತೆ ಬುಧವಾರ ನಿರ್ಧಾರ ಕೈಗೊಳ್ಳುವುದು ಎಂದು ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ತಿಳಿಸಿದ್ದಾರೆ.
ಕೇಂದ್ರ ಸಚಿವರ ಸಮನ್ವಯ ಸಮಿತಿ ಅಜಿತ್ಸಿಂಗ್ ನೇತೃತ್ವದಲ್ಲಿ ಬುಧವಾರ ಸಭೆ ಸೇರಿ ಉಭಯ ರಾಜ್ಯಗಳಲ್ಲಿನ ಬರ ಪರಿಸ್ಥಿತಿಯ ಬಗೆಗೆ ಚರ್ಚೆ ನಡೆಸಲಿದೆ. ಆನಂತರವಷ್ಟೇ ಕೇಂದ್ರ ಸರ್ಕಾರದಿಂದ ದೊರಕುವ ಪರಿಹಾರ ಕುರಿತ ಪ್ರಕಟಣೆ ಹೊರಬೀಳಲು ಸಾಧ್ಯ ಎಂದು ರಾಜ್ಯ ನೀರಾವರಿ ನಿಗಮದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಕೃಷ್ಣ ಹೇಳಿದರು.
ಕಾವೇರಿ ವಿವಾದ: ಸೆ.6 ರ ಸಭೆಯಲ್ಲಿ ಮುಖ್ಯಮಂತ್ರಿ ಭಾಗವಹಿಸುವುದಿಲ್ಲ
ಸೆಪ್ಟಂಬರ್ 6 ರಂದು ದೆಹಲಿಯಲ್ಲಿ ಜರುಗುವ ಕಾವೇರಿ ನೀರು ಉಸ್ತುವಾರಿ ಸಮಿತಿಯ ಸಭೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಭಾಗವಹಿಸುತ್ತಿದ್ದು , ರಾಜ್ಯದ ನಿಲುವನ್ನು ಸಭೆಯಲ್ಲಿ ಅವರು ಮಂಡಿಸಲಿದ್ದಾರೆ ಎಂದು ಕೃಷ್ಣ ಹೇಳಿದ್ದಾರೆ. ಇದರಿಂದಾಗಿ ಸೆ. 6 ಸಭೆಯಲ್ಲಿ ಕೃಷ್ಣ ಭಾಗವಹಿಸುವ ನಿರೀಕ್ಷೆಗಳು ಸುಳ್ಳಾಗಿವೆ.
(ಇನ್ಫೋ ವಾರ್ತೆ)