ಖಾಸಗಿಗೆ ಸವಾಲಾಗಿ ಆಕಾಶವಾಣಿಯ ಎಫ್ಎಂ 101.3 MHz
ಬೆಂಗಳೂರು : ದೇಶದ ಪ್ರಪ್ರಥಮ ಖಾಸಗಿ ಎಫ್ಎಂ ಚಾನಲ್ ಜನಪ್ರಿಯತೆಯ ಉತ್ತುಂಗಕ್ಕೆ ಏರುತ್ತಿರುವಂತೆಯೇ ಅದಕ್ಕೆ ಕಡಿವಾಣ ಹಾಕಲು ಬೆಂಗಳೂರು ಆಕಾಶವಾಣಿ ಸೆಪ್ಟೆಂಬರ್ 1ರಿಂದ ಮೆಟ್ರೋ ಎಫ್.ಎಂ. ಚಾನಲ್ ಆರಂಭಿಸಿದೆ.
ಆಕಾಶವಾಣಿಯ ಎಫ್.ಎಂ.ನಲ್ಲಿ ಕನ್ನಡಗೀತೆಗಳು ಮೊಳುಗತ್ತಿವೆ. ಇದರಿಂದ ಫುಳಕಿತರಾಗಿರುವ ಕನ್ನಡ ಸಾಹಿತಿ - ಕಲಾವಿದರು ಮಂಗಳವಾರ ಡಾ. ಯು.ಆರ್. ಅನಂತಮೂರ್ತಿ ಅವರ ನೇತೃತ್ವದಲ್ಲಿ ಬೆಂಗಳೂರು ಆಕಾಶವಾಣಿ ಕೇಂದ್ರಕ್ಕೆ ಆಗಮಿಸಿ, ಸಿಬ್ಬಂದಿಗೆ ಸಿಹಿ ಹಂಚಿ ಶುಭ ಕೋರಿದರು.
ಅನಂತಮೂರ್ತಿ ನೇತೃತ್ವದ ನಿಯೋಗದಲ್ಲಿ ಖ್ಯಾತ ಗಾಯಕ ಶಿವಮೊಗ್ಗ ಸುಬ್ಬಣ್ಣ, ರಂಗ ಕಲಾವಿದೆ ಜಯಶ್ರೀ, ಕಪ್ಪಣ್ಣ ಮೊದಲಾವರು ಇದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅನಂತಮೂರ್ತಿ ಅವರು, ಗ್ರಾಮೀಣರಿಂದ ಹಾಗೂ ಜನಪದದಿಂದ ಮಾತ್ರ ಕನ್ನಡ ಉಳಿದಿದೆ. ಈಗ ಆಕಾಶವಾಣಿ ಎಫ್.ಎಂ. ಮೂಲಕ ಕನ್ನಡ ದುಂದುಭಿ ಮೊಳಗಿಸಬೇಕು ಎಂದರು.
ಸಾಹಿತಿ ಕಲಾವಿದರ ಅಭಿಮಾನಕ್ಕೆ ನಿಲಯದ ನಿರ್ದೇಶಕ ಎಚ್.ಆರ್. ಕೃಷ್ಣಮೂರ್ತಿ ವಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಕನ್ನಡ.ಇಂಡಿಯಾ ಇನ್ಫೋ.ಕಾಂನೊಂದಿಗೆ ಮಾತನಾಡಿದ ಅವರು, ಆಕಾಶವಾಣಿಯ ಪ್ರೆೃಮ್ ಚಾನೆಲ್ ಸುದ್ದಿ - ಮಾಹಿತಿ - ಮನರಂಜನೆ ಹಾಗೂ ಶಿಕ್ಷಣವನ್ನು ಒಳಗೊಂಡಿದ್ದರೆ, ವಿವಿಧ ಭಾರತಿ ಪೂರ್ಣ ಮನರಂಜನೆಯ ಚಾನೆಲ್. ಆದರೆ, ಎಫ್.ಎಂ. 101.3 ಎಂಎಚ್ಜಡ್ ತರಂಗಾಂತರದಲ್ಲಿ ಆರಂಭವಾಗಿರುವ ಮೆಟ್ರೋ ಚಾನೆಲ್ ಮನರಂಜನೆ - ಮಾಹಿತಿಯ ಆಗರವಾಗಲಿದೆ ಎಂದರು.
ಈ ಚಾನೆಲ್ ಶೇ.80ರಷ್ಟು ಸಂಗೀತಕ್ಕೇ ಮುಡಿಪಾಗಿದ್ದು, ಪಾಶ್ಚಾತ್ಯ ಸಂಗೀತವೂ ಸೇರಿದಂತೆ ಎಲ್ಲ ಬಗೆಯ ಸಂಗೀತವೂ ಇಲ್ಲಿ ಬಿತ್ತರಗೊಳ್ಳಲಿದೆ ಎಂದರು. ಆಕಾಶವಾಣಿ 1977ರಲ್ಲಿಯೇ ಎಫ್.ಎಂ. ಕೇಂದ್ರ ಆರಂಭಿಸಿತ್ತು. ಈಗ ಆಕಾಶವಾಣಿ ಒಟ್ಟು 7 ಎಫ್.ಎಂ. ಕೇಂದ್ರಗಳನ್ನು ಹೊಂದಿದೆ ಎಂಬ ವಿವರಗಳನ್ನು ನೀಡಿದರು.
ಅಮೂಲ್ಯ ದ್ವನಿಸುರಳಿಯ ಭಂಡಾರವನ್ನೇ ಹೊಂದಿರುವ ಆಕಾಶವಾಣಿ ಮೈಸೂರು ಅನಂತಸ್ವಾಮಿ, ಪಿ. ಕಾಳಿಂಗರಾವ್, ಪದ್ಮಚರಣ್, ಎಂ.ಎಸ್. ಸುಬ್ಬುಲಕ್ಷ್ಮೀ, ಬಾಲಮುರಳಿ ಕೃಷ್ಣ, ಗಂಗೂಬಾಯಿ ಹಾನಗಲ್, ಪಂಡಿತ್ ಭೀಮ್ಸೇನ್ ಜೋಷಿ, ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ಮೊದಲಾದ ಖ್ಯಾತನಾಮರ ಸಂಗೀತ ಸುಧೆಯನ್ನು ಶ್ರೋತೃಗಳಿಗೆ ಉಣಬಡಿಸಲಿದೆ ಎಂದರು.
ಎಫ್.ಎಂ. ಚಾನೆಲ್ ಹವಾಮಾನವೂ ಸೇರಿದಂತೆ ಹಲವು ಉಪಯುಕ್ತ ಮಾಹಿತಿಗಳನ್ನು ತಿಳಿಸುತ್ತದೆ. ಬೆಂಗಳೂರು ಆಕಾಶವಾಣಿಯ ಪ್ರಧಾನ ಕೇಂದ್ರ ಅಥವಾ ವಿವಿಧ ಭಾರತಿಯಲ್ಲಿ ಈಗಾಗಲೇ ಬಿತ್ತರವಾಗಿರುವ ಕಾರ್ಯಕ್ರಮಗಳನ್ನು ಎಫ್.ಎಂ. ಮರು ಪ್ರಸಾರ ಮಾಡುವುದಿಲ್ಲ. ಅದು ತನ್ನದೇ ಶೈಲಿಯ ವಿನೂತನ ಕಾರ್ಯಕ್ರಮವನ್ನು ಸಿದ್ಧಪಡಿಸುತ್ತದೆ ಎಂದು ಆಕಾಶವಾಣಿ ಕೇಂದ್ರದ ಉಪ ನಿರ್ದೇಶಕ ಕೆ. ಗುಣ ಶೇಖರ್ ತಿಳಿಸಿದರು.
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...