ಸಂಪನ್ಮೂಲ ಕೇಂದ್ರದ ಮೈಸೂರು ಘಟಕಕ್ಕೆ ಯುನೆಸ್ಕೋ ಪುರಸ್ಕಾರ
ಮೈಸೂರು : ರಾಜ್ಯ ಸಂಪನ್ಮೂಲ ಕೇಂದ್ರದ ಮೈಸೂರು ಘಟಕಕ್ಕೆ ಯುನೆಸ್ಕೋ-2001 ಪ್ರಶಸ್ತಿ ಲಭಿಸಿದೆ.
ರಾಷ್ಟ್ರೀಯ ಸಾಕ್ಷರತಾ ಮಿಶನ್ ವತಿಯಿಂದ ನೀಡಲಾಗುವ ಈ ಪ್ರಶಸ್ತಿಯನ್ನು ಸಾಕ್ಷರತೆ ಮತ್ತು ವಯಸ್ಕರ ಶಿಕ್ಷಣ ಕ್ಷೇತ್ರದಲ್ಲಿ ಶೈಕ್ಷಣಿಕ ಮತ್ತು ತಾಂತ್ರಿಕ ಕೆಲಸಗಳನ್ನು ಯಶಸ್ವಿಯಾಗಿ ನಿರ್ವಹಿಸಿರುವುದಕ್ಕಾಗಿ ನೀಡಲಾಗುತ್ತದೆ ಎಂದು ಸಂಪನ್ಮೂಲ ಕೇಂದ್ರದ ಅಧ್ಯಕ್ಷರು ಹಾಗೂ ವಿಭಾಗಾಧಿಕಾರಿಯಾದ ಎಚ್. ಭಾಸ್ಕರ್ ಸೋಮವಾರ ತಿಳಿಸಿದ್ದಾರೆ.
ಪ್ರಶಸ್ತಿಯು 500 ಅಮೆರಿಕನ್ ಡಾಲರ್ ನಗದು ಹಣ ಮತ್ತು ಪ್ರಶಸ್ತಿ ಫಲಕವನ್ನೊಳಗೊಂಡಿರುತ್ತದೆ. ಸೆಪ್ಟೆಂಬರ್ 8ರಂದು ದೆಹಲಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವ ಡಾ. ಮುರಳಿ ಮನೋಹರ ಜೋಶಿ ಅವರು ಪ್ರದಾನ ಮಾಡುವರು.
1972ರಲ್ಲಿ ನೆಹರು ಸಾಕ್ಷರತೆ ಹಾಗೂ 73ರಲ್ಲಿ ಮೊಹಮದ್ ರಜಾ ಪಹ್ಲವಿ ಪ್ರಶಸ್ತಿಗಳನ್ನು ರಾಜ್ಯ ಸಂಪನ್ಮೂಲ ಕೇಂದ್ರದ ಮೈಸೂರು ಘಟಕ ಪಡೆದುಕೊಂಡಿತ್ತು. ಪ್ರಸ್ತುತ ಘಟಕದ ಆಡಳಿತಮಂಡಳಿಯಲ್ಲಿ ಜ್ಞಾನ ಪೀಠ ಪ್ರಶಸ್ತಿ ವಿಜೇತ ಸಾಹಿತಿ ಯು. ಆರ್. ಅನಂತ ಮೂರ್ತಿ, ರೈಟ್ ಲೈವ್ಲಿ ಹುಡ್ ಪ್ರಶಸ್ತಿ ವಿಜೇತ ಡಾ. ಸುದರ್ಶನ್ ಮುಂತಾದವರಿದ್ದಾರೆ.
(ಇನ್ಫೋ ವಾರ್ತೆ)