ಕಾವೇರಿ ಪರಿಶೀಲನಾ ಸಮಿತಿ ತಂಡ ನವದೆಹಲಿಗೆ ವಾಪಸ್
ಬೆಂಗಳೂರು : ಕುರುವೈ ಬೆಳೆಗೆ ನೀರು ಬಿಡುವಂತೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಆಗ್ರಹಿಸಿದ್ದ ಹಿನ್ನೆಲೆಯಲ್ಲಿ ರಾಜ್ಯದ ಕಾವೇರಿ ಕಣಿವೆಯಲ್ಲಿರುವ ಜಲಾಶಯಗಳ ನೀರಿನ ಮಟ್ಟ ಪರಿಶೀಲಿಸಲು ಆಗಮಿಸಿದ್ದ ಕೇಂದ್ರ ಜಲ ಆಯೋಗದ ತಂಡ ದೆಹಲಿಗೆ ಹಿಂತಿರುಗಿದೆ.
ಎರಡು ದಿನಗಳ ಹಿಂದೆ ರಾಜ್ಯಕ್ಕೆ ಆಗಮಿಸಿದ್ದ ಕೇಂದ್ರ ಜಲ ಆಯೋಗದ ಅಧ್ಯಕ್ಷ ಗೋಪಾಲಕೃಷ್ಣ ನೇತೃತ್ವದ ತಂಡ ಕೃಷ್ಣರಾಜ ಸಾಗರ, ಕಬಿನಿ, ಹಾರಂಗಿ ಹಾಗೂ ಹೇಮಾವತಿ ಜಲಾಶಯಗಳಿಗೆ ಭೇಟಿ ನೀಡಿ, ನೀರಿನ ಮಟ್ಟದ ಬಗ್ಗೆ ಖುದ್ದು ಪರಿಶೀಲನೆ ನಡೆಸಿತು.
ತಮಿಳುನಾಡು ಮುಖ್ಯಮಂತ್ರಿ ಕಾವೇರಿಯಿಂದ 17 ಟಿ.ಎಂ.ಸಿ. ನೀರು ಬಿಡುವಂತೆ ಮುಖ್ಯಮಂತ್ರಿ ಕೃಷ್ಣ ಅವರಿಗೆ ಪತ್ರ ಬರೆದಿದ್ದರು. ಆದರೆ, ರಾಜ್ಯ ಬರ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ನೀರು ಬಿಡಲು ಸಾಧ್ಯವಿಲ್ಲ ಎಂದು ರಾಜ್ಯದ ಮುಖ್ಯಮಂತ್ರಿ ನಿರಾಕರಿಸಿದ್ದರು.
ಈ ಹಿನ್ನಲೆಯಲ್ಲಿ ಇದೇ 6ರಂದು ನವದೆಹಲಿಯಲ್ಲಿ ಕಾವೇರಿ ನಿರ್ವಹಣಾ ಸಮಿತಿ ಸಭೆ ಕರೆಯಲಾಗಿದ್ದು, ಕಾವೇರಿ ಕಣಿವೆಯ ಜಲಾಶಯಗಳ ನೀರಿನ ಮಟ್ಟದ ಬಗ್ಗೆ ಅರಿಯಲು ಕೇಂದ್ರ ಸರಕಾರ ತಂಡವನ್ನು ತಮಿಳು ನಾಡು ಹಾಗೂ ಕರ್ನಾಟಕಕ್ಕೆ ಕಳುಹಿಸಿತ್ತು. ತಂಡ ಸೆ.5ರೊಳಗೆ ಕೇಂದ್ರಕ್ಕೆ ವರದಿ ಸಲ್ಲಿಸಲಿದೆ.
ಮುಖಪುಟ / ಇವತ್ತು... ಈ ಹೊತ್ತು...