ಕಡು ಬಡವರನ್ನು ಗುರುತಿಸಲು ರಾಜ್ಯಗಳಿಗೆ ಮೂರು ತಿಂಗಳ ಗಡುವು
ನವದೆಹಲಿ : ಹಸಿವಿನಿಂದ ಸಾವುಗಳು ಸಂಭವಿಸಿದ ವರದಿಗಳ ಹಿನ್ನೆಲೆಯಲ್ಲಿ, ಅಗತ್ಯ ಇರುವವರಿಗೆ ಸಕಾಲಕ್ಕೆ ಆಹಾರ ಧಾನ್ಯ ಪೂರೈಸುವಂತೆ ಹಾಗೂ ಬಡತನ ರೇಖೆಗಿಂತ ಕೆಳಗೆ ಇರುವವರನ್ನು ಮೂರು ತಿಂಗಳೊಳಗಾಗಿ ಗುರುತಿಸುವಂತೆ ಕೇಂದ್ರವು ರಾಜ್ಯ ಸರಕಾರಗಳಿಗೆ ಕಟ್ಟು ನಿಟ್ಟಿನ ಆದೇಶ ಹೊರಡಿಸಿದೆ.
ಅಗತ್ಯ ವಸ್ತುಗಳ ಕಾಯ್ದೆಯಡಿ ಹೊರಡಿಸಲಾದ ಈ ಆದೇಶವನ್ನು ಉಲ್ಲಂಘಿಸಿದವರಿಗೆ ಶಿಕ್ಷೆ ವಿಧಿಸುವ ಅವಕಾಶವನ್ನೂ ಕಲ್ಪಿಸಲಾಗಿದೆ. ಒರಿಸ್ಸಾ ಮತ್ತು ಹಿಮಾಚಲ ಪ್ರದೇಶದಲ್ಲಿ ಜನ ಹಸಿವಿನಿಂದ ಸತ್ತ ವರದಿಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಈ ಆದೇಶದಿಂದ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳನ್ನು ಗುರುತಿಸುವ ಮತ್ತು ನ್ಯಾಯಬೆಲೆ ಅಂಗಡಿಗಳ ಲೈಸನ್ಸಿಂಗ್ ಮತ್ತು ಪಡಿತರ ಚೀಟಿಗಳ ವಿತರಣೆಯ ಅವ್ಯವಹಾರಗಳನ್ನು ಬಯಲಿಗೆಳೆಯುವ ನಿಟ್ಟಿನಲ್ಲಿ ರಾಜ್ಯ ಸರಕಾರಗಳು ಕೆಲಸ ಮಾಡುವುದು ಅನಿವಾರ್ಯವಾಗಿದೆ ಎಂದು ಭಾನುವಾರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಆಹಾರ ಸಚಿವ ಶಾಂತ ಕುಮಾರ್ ಹೇಳಿದ್ದಾರೆ.
ಬಹುಮಾನ : ಭಾರತೀಯ ಆಹಾರ ನಿಗಮದಲ್ಲಿ ಆಹಾರ ಧಾನ್ಯ ಕೊಳೆಯುತ್ತಿದ್ದರೂ, ದೇಶದಲ್ಲಿ ಹಸಿವಿನಿಂದ ಜನ ಸಾಯುತ್ತಾರೆ ಎಂಬ ವರದಿಗಳು ಬರುತ್ತಿರುವುದು ವ್ಯವಸ್ಥೆಯಲ್ಲಿನ ಕೊರತೆಯ ಫಲ. ಆದ್ದರಿಂದ ಆಹಾರ ನಿಗಮದಿಂದ ಹೆಚ್ಚಿನ ಪ್ರಮಾಣದ ಆಹಾರ ಧಾನ್ಯಗಳನ್ನು ಪಡೆದು ಅದನ್ನು ಸೂಕ್ತ ಸಮಯದಲ್ಲಿ ಸಾರ್ವನಿಕ ವಿತರಣಾ ವ್ಯವಸ್ಥೆಯ ಮೂಲಕ ಅರ್ಹರಿಗೆ ವಿತರಿಸುವ ರಾಜ್ಯಗಳಿಗೆ ಕೇಂದ್ರ ಸರಕಾರ ನಗದು ಬಹುಮಾನ ಘೋಷಿಸಿದೆ.
ಆ ಪ್ರಕಾರ ರಾಜ್ಯಗಳಿಗೆ 3 ಟ್ರೋಫಿಗಳು, ರಾಜ್ಯಗಳ ತಲಾ ಒಂದು ಜಿಲ್ಲೆಗೆ 1 ಲಕ್ಷ ರೂಪಾಯಿ ನಗದು ಮತ್ತು ನ್ಯಾಯಬೆಲೆ ಅಂಗಡಿಗಳಿಗೆ ತಲಾ 50 ಮತ್ತು 25 ಸಾವಿರ ರೂಪಾಯಿ ನೀಡಲಾಗುವುದು.
(ಇನ್ಫೋ ವಾರ್ತೆ)