ವಿವಿ ಹಂತದಲ್ಲಿ ಜ್ಯೋತಿಷ್ಯ:ಕೇಂದ್ರಸರ್ಕಾರಕ್ಕೆ ಸುಪ್ರಿಂಕೋರ್ಟ್ ನೋಟಿಸ್
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ವಿವಿಧ ವಿಶ್ವ ವಿದ್ಯಾಲಯಗಳಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಮಟ್ಟದಲ್ಲಿ ಜ್ಯೋತಿಷ್ಯ ವಿಜ್ಞಾನ ಕೋರ್ಸ್ ಪ್ರಾರಂಭಿಸುವ ಕೇಂದ್ರ ಸರ್ಕಾರದ ವಿವಾದಾಸ್ಪದ ನಿರ್ಧಾರಕ್ಕೆ ಮತ್ತೊಂದು ತಿರುವು ದೊರೆತಿದೆ. ಈ ವಿಷಯದ ಕುರಿತು ಮಾನವ ಸಂಪನ್ಮೂಲಗಳ ಸಚಿವಾಲಯ ಹಾಗೂ ವಿಶ್ವ ವಿದ್ಯಾಲಯಗಳ ಧನ ಸಹಾಯ ಆಯೋಗ (ಯುಜಿಸಿ)ಕ್ಕೆ ಸುಪ್ರಿಂಕೋರ್ಟ್ ಸೋಮವಾರ ನೋಟಿಸ್ ನೀಡಿದೆ.
ನ್ಯಾಯಮೂರ್ತಿಗಳಾದ ಎಸ್.ರಾಜೇಂದ್ರಬಾಬು, ದೊರೈಸ್ವಾಮಿ ರಾಜು ಅವರನ್ನು ಒಳಗೊಂಡ ಜಂಟಿ ನ್ಯಾಯಪೀಠ ಈ ನೋಟಿಸನ್ನು ಜಾರಿ ಮಾಡಿದೆ. ವಿಜ್ಞಾನಿ ಡಾ.ಪಿ.ಎಂ. ಭಾರ್ಗವ, ಪ್ರೊ.ಕೆ.ಸುಭಾಷ್ಚಂದ್ರ ರೆಡ್ಡಿ ಹಾಗೂ ಚಂದನ ಚಕ್ರವರ್ತಿ ಅವರು ತಕರಾರು ಅರ್ಜಿಯನ್ನು ಸಲ್ಲಿಸಿದ್ದರು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಧ್ಯ ಪ್ರವೇಶಿಸಲು ಆಂಧ್ರಪ್ರದೇಶದ ಹೈಕೋರ್ಟ್ ನಿರಾಕರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ವಿಶ್ವ ವಿದ್ಯಾಲಯ ಮಟ್ಟದಲ್ಲಿ ಜ್ಯೋತಿಷ್ಯ ವಿಜ್ಞಾನ ಕೋರ್ಸ್ ಅಳವಡಿಸುವ ಕ್ರಮ ಅಸಂಬದ್ಧ ಹಾಗೂ ಅತಾರ್ಕಿಕವಾದದ್ದು . ಜ್ಯೋತಿಷ್ಯ ಕೋರ್ಸ್ಗಾಗಿ ಯುಜಿಸಿ ಕೋಟ್ಯಂತರ ರುಪಾಯಿಗಳನ್ನು ಖರ್ಚು ಮಾಡುತ್ತಿದೆ. ಯುಜಿಸಿಯ ಈ ಕ್ರಮ ಭಾರತ ಈವರೆಗೆ ಸಾಧಿಸಿರುವ ವೈಜ್ಞಾನಿಕ ಕ್ಷೇತ್ರದ ಅಗ್ಗಳಿಕೆಗೆ ಕಪ್ಪುಚುಕ್ಕೆ ಎಂದು ಅರ್ಜಿದಾರರು ವಾದಿಸಿದ್ದರು.
ಅಕ್ಟೋಬರ್ 16, 2000 ದಿನಾಂಕದ ಯುಜಿಸಿ ಸಭೆ, ವಿಶ್ವ ವಿದ್ಯಾಲಯಗಳಲ್ಲಿ ಜ್ಯೋತಿಷ್ಯವನ್ನು ಕಲಿಸುವ ಪ್ರಸ್ತಾವನೆಗೆ ಸಮ್ಮತಿ ನೀಡಿತ್ತು . ಜನವರಿ 25, 2001 ದಂದು ನೂತನ ಕೋರ್ಸ್ಗೆ ಜ್ಯೋತಿರ್ ವಿಜ್ಞಾನ್ ಎನ್ನುವ ನಾಮಕರಣವನ್ನೂ ಮಾಡಲಾಗಿತ್ತು . ಫೆಬ್ರವರಿ 23, 2001 ದಿನಾಂಕದಂದು- ಜ್ಯೋತಿರ್ ವಿಜ್ಞಾನವನ್ನು ಪದವಿ, ಸ್ನಾತಕೋತ್ತರ ಪದವಿ ಹಾಗೂ ಸಂಶೋಧನಾ ಹಂತಗಳಲ್ಲಿ ಅಳವಡಿಸುವಂತೆ ಯುಜಿಸಿ ವಿವಿಧ ವಿಶ್ವ ವಿದ್ಯಾಲಯಗಳಿಗೆ ಪತ್ರವನ್ನೂ ಬರೆದಿತ್ತು ಎನ್ನುವ ವಿಷಯಗಳನ್ನು ಅರ್ಜಿದಾರರು ಹೆಕ್ಕಿ ತೋರಿಸಿದ್ದಾರೆ.
ನೂತನ ಕೋರ್ಸ್ಗಳನ್ನು ಆರಂಭಿಸುವ ಪ್ರಸ್ತಾವನೆಗಳನ್ನು ಸಲ್ಲಿಸಲು ಮಾರ್ಚ್ 15 ರ ಕೊನೆ ದಿನಾಂಕವನ್ನು ಯುಜಿಸಿ ಗೊತ್ತುಪಡಿಸಿತ್ತು . ಏಪ್ರಿಲ್ ಮಧ್ಯಭಾಗದ ವೇಳೆಗೆ ಸುಮಾರು 35 ವಿಶ್ವ ವಿದ್ಯಾಲಯಗಳು ಕೋರ್ಸ್ ಆರಂಭಕ್ಕೆ ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಿದ್ದವು ಎಂದು ಅರ್ಜಿದಾರರು ತಿಳಿಸಿದ್ದಾರೆ.
(ಪಿಟಿಐ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...