ಆಂಧ್ರಪ್ರದೇಶದಲ್ಲಿ ಅಕ್ಕ ಮಹಾದೇವಿ ಪ್ರತಿಮೆ ಸ್ಥಾಪನೆಗೆ ಸಮ್ಮತಿ
ಬೆಂಗಳೂರು : ತನ್ನೆಲ್ಲಾ ವಚನಗಳನ್ನೂ ಶ್ರೀಶೈಲ ಮಲ್ಲಿಕಾರ್ಜುನನಿಗೆ ಅರ್ಪಣೆ ಮಾಡಿದ ವಚನಕಾರ್ತಿ, ಶಿವಶರಣೆ ಅಕ್ಕಮಹಾದೇವಿಯ ಪ್ರತಿಮೆಯನ್ನು ಆಂಧ್ರಪ್ರದೇಶದ ಕದಳಿಯಲ್ಲಿ ಸ್ಥಾಪಿಸಲು ಆಂಧ್ರ ಸರಕಾರ ಒಪ್ಪಿಗೆ ನೀಡಿದೆ. ಈ ವಿಷಯವನ್ನು ರಾಜ್ಯ ಸಂಸ್ಕೃತಿ ಸಚಿವೆ ರಾಣಿ ಸತೀಶ್ ತಿಳಿಸಿದ್ದಾರೆ.
ಅಖಿಲ ಭಾರತ ವೀರಶೈವ ಮಹಾಸಭಾದ ಆಶ್ರಯದಲ್ಲಿ ನಡೆದ ವೀರಶೈವ ಧರ್ಮ ಜಾಗೃತಿ ಸಮ್ಮೇಳನ ಹಾಗೂ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾಜಿ ಸಚಿವೆ ಹಾಗೂ ಲೇಖಕಿ ಲೀಲಾದೇವಿ ಆರ್. ಪ್ರಸಾದ್ ಅವರಿಗೆ ‘ಅಕ್ಕ’ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡುತ್ತಿದ್ದರು.
ಮಹಾದೇವಿ ಅಕ್ಕನ ಪ್ರತಿಮೆಯನ್ನು ಕದಳಿಯಲ್ಲಿ ಸ್ಥಾಪಿಸಲು ಅನುಮತಿ ಕೋರಿ ತಾವು ಆಂಧ್ರ ಪ್ರದೇಶ ಸರಕಾರದ ಧಾರ್ಮಿಕ ದತ್ತಿ ಸಚಿವರಿಗೆ ಸಲ್ಲಿಸಿದ್ದ ಮನವಿಗೆ ಮಾನ್ಯತೆ ಸಿಕ್ಕಿದೆ. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು, ಕದಳಿಯಲ್ಲಿ ಪ್ರತಿಮೆ ಸ್ಥಾಪಿಸುವುದರ ಜತೆಗೆ ಆ ಗ್ರಾಮವನ್ನು ಸಂಪೂರ್ಣ ಅಭಿವೃದ್ಧಿ ಪಡಿಸುವುದಾಗಿ ತಿಳಿಸಿದ್ದಾರೆ ಎಂದೂ ಹೇಳಿದರು.
ಸಿದ್ಧಗಂಗಾ ಮಠಾಧ್ಯಕ್ಷ ಡಾ. ಶಿವಕುಮಾರ ಸ್ವಾಮಿಗಳ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ರಾಮಲಿಂಗಾರೆಡ್ಡಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಿ. ಸೋಮಶೇಖರ್ ಮೊದಲಾದವರು ಪಾಲ್ಗೊಂಡಿದ್ದರು. ಬೆಳಗ್ಗೆ ನಡೆದ ಕಾರ್ಯಕ್ರಮದಲ್ಲಿ ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಗೊ.ರು. ಚನ್ನಬಸಪ್ಪ ಅವರಿಗೆ ಶರಣಶ್ರೀ ಪ್ರಶಸ್ತಿ ನೀಡಿ ಗೌರವಿಸಿದರು.