ಸೆಪ್ಟೆಂಬರ್ ತಿಂಗಳಿನಿಂದಲೇ ಲೋಡ್ ಷೆಡ್ಡಿಂಗ್ ಜಾರಿ ಸಂಭವ
ಬೆಂಗಳೂರು : ಪ್ರಸಕ್ತ ಸನ್ನಿವೇಶದಲ್ಲಿ ಎಲ್ಲ ವಲಯದಲ್ಲೂ ವಿದ್ಯುತ್ ದರ ಏರಿಸುವುದು ಅನಿವಾರ್ಯ ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ವಿ.ಪಿ. ಬಳಿಗಾರ್ ಪುನರುಚ್ಚರಿಸಿದ್ದಾರೆ. ಯಾವ ವಲಯಕ್ಕೆ ಎಷ್ಟು ದರ ಹೆಚ್ಚಿಸಬೇಕು ಎಂಬ ಬಗ್ಗೆ ನಿರ್ಧರಿಸಲಾಗುವುದು ಎಂದೂ ತಿಳಿಸಿದ್ದಾರೆ.
ರಾಜ್ಯದಲ್ಲಿ ಮಳೆಯ ಪ್ರಮಾಣ ಕುಸಿತದಿಂದ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಿದ್ದು, ತೀವ್ರ ವಿದ್ಯುತ್ ಕೊರತೆ ಎದುರಾಗಿದೆ. ಹೀಗಾಗಿ ಸೆಪ್ಟೆಂಬರ್ ತಿಂಗಳ ಅಂತ್ಯದಿಂದಲೇ ಲೋಡ್ ಷೆಡ್ಡಿಂಗ್ ಜಾರಿ ಮಾಡುವುದು ಅನಿವಾರ್ಯವಾಗುತ್ತದೆ ಎಂಬ ಸುಳಿವನ್ನೂ ಅವರು ನೀಡಿದರು.
ವಿದ್ಯುತ್ ದರ ಏರಿಕೆ ಸಂಬಂಧ ಸೆಪ್ಟೆಂಬರ್ 5ರಂದು ನಡೆಯಲಿರುವ ಸಂಪುಟ ಸಭೆ ನಿರ್ಧಾರ ಕೈಗೊಳ್ಳಲಿದೆ ಎಂದ ಅವರು, ನೀರಾವರಿ, ಭಾಗ್ಯಜ್ಯೋತಿ, ಕುಬೇರ ಜ್ಯೋತಿ ಸೇರಿದಂತೆ ಎಲ್ಲ ವಲಯಕ್ಕೂ ಮೀಟರ್ ಅಳವಡಿಸುವ ಕಾರ್ಯ ಕರಾವಳಿಯಿಂದ ಆರಂಭಿಸಲಾಗುವುದು ಎಂದರು.
ಕರ್ನಾಟಕ ವಿದ್ಯುತ್ ನಿಗಮದ ಅಧ್ಯಕ್ಷ ಜ್ಯೋತಿ ರಾಮಲಿಂಗಂ ಅವರಿಗೆ 135 ಕೋಟಿ ರುಪಾಯಿಗಳ ಬಾಕಿ ಮೊತ್ತದ ಚೆಕ್ ಅನ್ನು ನೀಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಬಳಿಗಾರ್ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಎದುರಿಸುತ್ತಿರುವ ನಷ್ಟದ ಪ್ರಮಾಣ ತಗ್ಗಿಸಲು ವಿದ್ಯುತ್ ದರ ಏರಿಕೆ ಕ್ರಮ ಅನಿವಾರ್ಯವಾಗಿದೆ ಎಂದರು.
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...