ಬಳ್ಳಾರಿ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಜೊತೆಗೆ 178 ಕೋಟಿ ರು. ನಿಧಿ
ಬೆಂಗಳೂರು : ಬಳ್ಳಾರಿ ಜಿಲ್ಲೆಯ ಸರ್ವತೋಮುಖ ಪ್ರಗತಿಗಾಗಿ ರಾಜ್ಯ ಸರ್ಕಾರ ನಿಗದಿಪಡಿಸಿರುವ 3300 ಕೋಟಿ ರುಪಾಯಿಗಳ ವಿಶೇಷ ಪ್ಯಾಕೇಜ್ ಜೊತೆಗೆ, 2001-02 ನೇ ಇಸವಿಯಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ 178 ಕೋಟಿ ರು.ಗಳ ಹೆಚ್ಚುವರಿ ನಿಧಿಯನ್ನು ಖರ್ಚು ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ನೇತೃತ್ವದಲ್ಲಿ ಗುರುವಾರ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಜಿಲ್ಲೆಯ ಅಭಿವೃದ್ಧಿಗೆ ಕಳೆದ ವರ್ಷ ಪ್ರಕಟಿಸಿದ್ದ 3300 ಕೋಟಿ ರು. ವಿಶೇಷ ಪ್ಯಾಕೇಜ್ನಡಿಯಲ್ಲಿ ವಿವಿಧ ಯೋಜನೆಗಳ ಕಾಮಗಾರಿಯ ಪ್ರಗತಿ ಸಮೀಕ್ಷೆಯನ್ನು ಸಭೆ ನಡೆಸಿತು. ಈ ವಿಷಯವನ್ನು ಬಳ್ಳಾರಿ ಜಿಲ್ಲಾ ಉಪ ಆಯುಕ್ತ ಜಾವೇದ್ ಅಖ್ತರ್ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು .
ಜಿಲ್ಲೆಯಲ್ಲಿನ ಪ್ರಸಕ್ತ ವರ್ಷದ ಯೋಜನೆಗಳ ಅನುಷ್ಠಾನದ ಬಗೆಗೆ ಮುಖ್ಯಮಂತ್ರಿಗಳು ಸಂತಸ ವ್ಯಕ್ತಪಡಿಸಿದರು ಎಂದು ಅಖ್ತರ್ ಹೇಳಿದರು. 2500 ಕೋಟಿ ರುಪಾಯಿ ಬಂಡವಾಳವನ್ನು ವಿಜಯನಗರ ಉಕ್ಕು ಕಾರ್ಖಾನೆಯಲ್ಲಿ ತೊಡಗಿಸುವುದರ ಜೊತೆಗೆ, ಹೆಚ್ಚುವರಿ 800 ಕೋಟಿ ರುಪಾಯಿಗಳನ್ನು 2000-01 ರಿಂದ ಮೂರು ವರ್ಷ ಅವಧಿಯವರೆಗಿನ ಯೋಜನೆಗಳಲ್ಲಿ ವಿನಿಯೋಗಿಸಲಾಗುವುದು ಎಂದು ಅವರು ಹೇಳಿದರು.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾಗಾಂಧಿ ಅವರು ಆಯ್ಕೆಯಾಗಿ ತೆರವು ಮಾಡಿದ್ದ ಬಳ್ಳಾರಿ ಕ್ಷೇತ್ರದ ಅಭಿವೃದ್ಧಿಗೆ, 3300 ಕೋಟಿ ರುಪಾಯಿಗಳ ವಿಶೇಷ ಪ್ಯಾಕೇಜನ್ನು ರಾಜ್ಯ ಸರ್ಕಾರ ನಿಗದಿಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
(ಪಿಟಿಐ)
ಮುಖಪುಟ / ಕೃಷ್ಣಗಾರುಡಿಯ ಕನ್ನಡಿ