ವಿಕ್ಟೋರಿಯಾ, ವಾಣಿ ವಿಲಾಸ ಆಸ್ಪತ್ರೆ ಮುಚ್ಚುವುದಿಲ್ಲ : ಡಾ.ಪರಮೇಶ್ವರ್
ಬೆಂಗಳೂರು : ಬಡ ಹಾಗೂ ಮಧ್ಯಮ ವರ್ಗದ ರೋಗಿಗಳಿಗೆ ಉತ್ತಮ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಬೆಂಗಳೂರಿನ ಪ್ರತಿಷ್ಠಿತ ವಿಕ್ಟೋರಿಯಾ, ವಾಣಿ ವಿಲಾಸ ಆಸ್ಪತ್ರೆಗಳನ್ನು ಮುಚ್ಚುವುದಿಲ್ಲ ಎಂದು ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ. ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಕೆಂಪೆಗೌಡ ಮೆಡಿಕಲ್ ಸೈನ್ಸಸ್ (ಕಿಮ್ಸ್), ವಿಕ್ಟೋರಿಯಾ ಹಾಗೂ ವಾಣಿ ವಿಲಾಸ ಆಸ್ಪತ್ರೆಗಳು ತ್ಯಾಜ್ಯ ವಸ್ತು ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿರುವ ಹಿನ್ನೆಲೆಯಲ್ಲಿ ಈ ಆಸ್ಪತ್ರೆಗಳನ್ನು ಮುಚ್ಚುವಂತೆ ರಾಜ್ಯ ಪರಿಸರ ನಿಯಂತ್ರಣಮಂಡಳಿ ಆ.24ರಂದು ಆದೇಶ ಹೊರಡಿಸಿತ್ತು.
ಈ ಆಸ್ಪತ್ರೆಗಳಲ್ಲಿ ಜೈವಿಕ ವೈದ್ಯಕೀಯ ತ್ಯಾಜ್ಯಗಳನ್ನು ಅವೈಜ್ಞಾನಿಕ ಹಾಗೂ ದೋಷಯುಕ್ತ ರೀತಿಯಲ್ಲಿ ವಿಲೇ ಮಾಡುತ್ತಿರುವ ಕಾರಣ ಪರಿಸರದ ಮೇಲೆ ಗಂಭೀರ ಪರಿಣಾಮಗಳು ಉಂಟಾಗುತ್ತಿದೆ. ಸುತ್ತ ಮುತ್ತಲ ಪ್ರದೇಶದ ಜನರ ಆರೋಗ್ಯಕ್ಕೂ ಹಾನಿಯುಂಟು ಮಾಡುತ್ತಿದೆ ಈ ಹಿನ್ನೆಲೆಯಲ್ಲಿ ಈ ಮೂರು ಆಸ್ಪತ್ರೆಗಳನ್ನು ಮುಚ್ಚುವಂತೆ ಮಂಡಳಿ ಆದೇಶಿಸಿತ್ತು.
ಈ ಮೂರು ಆಸ್ಪತ್ರೆಗಳಿಗೆ ವಿದ್ಯುತ್ ಸರಬರಾಜು ನಿಲ್ಲಿಸುವಂತೆ ಕೂಡ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕೆ.ಪಿ.ಟಿ.ಸಿ.ಎಲ್.ಗೆ ನಿರ್ದೇಶನ ನೀಡಿತ್ತು. ಆಸ್ಪತ್ರೆಗಳ ಕಾರ್ಯ ಚಟುವಟಿಕೆ ನಿಲ್ಲಿಸಲು ಕ್ರಮ ಕೈಗೊಳ್ಳುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೂ ಸೂಚನೆ ನೀಡಿತ್ತು.
ಈ ಸಂಬಂಧ ವಾಣಿ ವಿಲಾಸ ಹಾಗೂ ವಿಕ್ಟೋರಿಯಾ ಆಸ್ಪತ್ರೆಗಳಿಗೆ ಮಂಗಳವಾರ ಭೇಟಿ ನೀಡಿದ ಸಚಿವರು, ಪರಿಸರ ರಕ್ಷಿಸಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಆಸ್ಪತ್ರೆಗಳು ತ್ಯಾಜ್ಯ ವಸ್ತು ನಿರ್ವಹಣೆಯಲ್ಲಿ ವಿಫಲವಾಗಿರುವುದನ್ನು ಒಪ್ಪಿಕೊಂಡ ಅವರು, ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ದಿಷ್ಟಪಡಿಸಿರುವ ಎಲ್ಲ ಮಾನದಂಡಗಳಿಗೆ ಬದ್ಧವಾಗಿದ್ದು, ಈ ಸಂಬಂಧ ಆಸ್ಪತ್ರೆಗಳ ಆಧೀಕ್ಷಕರ ಸಭೆಯನ್ನು ಒಂದೆರಡು ದಿನದಲ್ಲೇ ಕರೆಯುವುದಾಗಿ ತಿಳಿಸಿದರು.
1998ರ ನಿಯಮದ ರೀತ್ಯ ಆಸ್ಪತ್ರೆಗಳು ಪರಿಸರ ಮಂಡಳಿಗೆ ನಿಗದಿತ ಶುಲ್ಕ ತುಂಬಿ ಪರವಾನಗಿ ಪಡೆಯಬೇಕು. ಸೋಂಕು ತರುವ ತ್ಯಾಜ್ಯ ಹಾಗೂ ಇತರ ತ್ಯಾಜ್ಯವನ್ನು ವಿಂಗಡಿಸಿ, ತರಬೇತಾದ ಸಿಬ್ಬಂದಿಯಿಂದ ವಿಲೇವಾರಿ ಮಾಡಬೇಕು. ಸೋಂಕು ಹರಡುವ ತ್ಯಾಜ್ಯಗಳನ್ನು ಸುಟ್ಟು ಭಸ್ಮ ಮಾಡಬೇಕು. ಈ ನಿಟ್ಟಿನಲ್ಲಿ ವಿಫಲವಾಗಿದ್ದ ಆಸ್ಪತ್ರೆಗಳಿಗೆ ಮಂಡಳಿ ಭಾರಿ ಹೊಡೆತ ನೀಡಿದೆ.