ಕಡೂರು ತಾಲ್ಲೂಕಿನ ನಿಡಘಟ್ಟ ಕ್ರಾಸ್ನಲ್ಲಿ ರಾಷ್ಟ್ರಪಿತನ ಮಂದಿರ!
(ಇನ್ಫೋ ಇನ್ಸೈಟ್)
ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲ್ಲೂಕಿನ ಕಡೆಗೆ ಯಾವಾಗಲಾದರೂ ಹೋದಲ್ಲಿ- ನಿಮ್ಮ ಟೈಂ ಟೇಬಲ್ನ ಒಂದೆರಡು ತಾಸುಗಳನ್ನು ನಿಡಘಟ್ಟ ವೃತ್ತದ ಬಳಿ ಕಳೆಯಲಿಕ್ಕೆ ಮೀಸಲಿಡಿ. ಅಲ್ಲೇನು ಆಗುಂಬೆ ಕೊಳ್ಳದಂಥ ಸೂರ್ಯ ಕಾಣಿಸುವುದಿಲ್ಲ . ಅಲ್ಲಿ ಹಸುರು ಸಿರಿ ಕಾಲುಣುಕಿಯೂ ಬಿದ್ದಿಲ್ಲ . ಮನರಂಜನೆ ಸವಲತ್ತುಗಳೂ ಅಲ್ಲಿಲ್ಲ . ಇರುವುದೊಂದು ಗುಡಿ!
ಆಗಲೋ ಈಗಲೋ ಕುಸಿದು ಬಿದ್ದೀತು ಅನ್ನುವಂಥ ದೇವಸ್ಥಾನದಲ್ಲೇನು ವಿಶೇಷ ಅನ್ನದಿರಿ. ಅದು ರಾಷ್ಟ್ರಪಿತನ ದೇಗುಲ ಅನ್ನುವುದು ವಿಷಯದಲ್ಲಿನ ಗಮ್ಮತ್ತು . ನಿಡಘಟ್ಟ ವೃತ್ತದ ಸುತ್ತಮುತ್ತಲಿನ ಜನರಿಗೆ ಮಹಾತ್ಮಗಾಂಧಿಗೊಂದು ಗುಡಿ ಕಟ್ಟಬೇಕೆಂದು ಯಾಕನ್ನಿಸಿತೊ ಗೊತ್ತಿಲ್ಲ .
ಸಿನಿತಾರೆಯರಾದ ಅಮಿತಾಬ್ ಬಚ್ಚನ್, ಖುಷ್ಬೂ ಮುಂತಾದವರಿಗೆ ದೇಗುಲ ಭಾಗ್ಯವನ್ನು ಅಭಿಮಾನಿಗಳು ಕರುಣಿಸಿರುವ ವಿಷಯ ನಮಗೆಲ್ಲ ಗೊತ್ತು . ನಿಡಘಟ್ಟದ ಮಂದಿ ಮಾತ್ರ ಗಾಂಧಿ ಮಹಾತ್ಮನ ಗುಡಿ ಕಟ್ಟಿದ್ದಾರೆ. ಪೂಜೆಯೂ ನಡೆಯುತ್ತಿದೆ. ಇಂಥ ದೇಗುಲ ದೇಶದ ಬೇರೆಡೆಗಳಲ್ಲಿ ಇದೆಯೇ ಅನ್ನುವ ಬಗ್ಗೆ ನಮಗೆ ಮಾಹಿತಿ ಸಿಕ್ಕಿಲ್ಲ . ನಿಮಗೇನಾದರೂ ತಿಳಿದಿದೆಯಾ?
ನಿಡಘಟ್ಟ ವೃತ್ತದಲ್ಲಿನ ಗಾಂಧಿ ದೇಗುಲ ಯಾವಾಗ ಬೇಕಾದರೂ ಕುಸಿಯುವ ಸ್ಥಿತಿಯಲ್ಲಿದೆ. ದೇವಾಲಯವನ್ನು ದುರಸ್ಥಿಗೊಳಿಸಲು ಹಣ ಬಿಡುಗಡೆ ಮಾಡುವಂತೆ ಬೀರೂರು ಕ್ಷೇತ್ರದ ಶಾಸಕ ಮಲ್ಲಿಕಾರ್ಜುನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ. ರಾಣಿ ಸತೀಶ್ ಕೇಳಿಸಿಕೊಂಡಿದ್ದಾರಂತೆ. ದೇಗುಲ ದುರಸ್ಥಿ ಕಾರ್ಯ ಸದ್ಯದಲ್ಲಿಯೇ ಪ್ರಾರಂಭವಾಗುತ್ತದೆ ಅನ್ನುತ್ತಾರೆ ಶಾಸಕರು. ಏ ಮುಂಗಾರು, ಹಿಂಗಾರುಗಳೇ ಅಲ್ಲಿಯವರೆಗೂ ಬಿರುಸಾಗದಿರಿ ಎಂದು ಕೋರೋಣವಾ!?