ಸೆ.6ರ ಕಾವೇರಿ ಸಭೆ ಮುಗಿವ ತನಕ ಮೌನಿಯಾಗಿರಲು ಜಯಾ ನಿರ್ಧಾರ
ಚೆನ್ನೈ : ತಮಿಳುನಾಡಿನ ಕುರುವೈ ಬೆಳೆಗೆ ಕಾವೇರಿ ನೀರು ಹರಿಸುವ ವಿಷಯಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿ ಸೆಪ್ಟೆಂಬರ್ 6ರಂದು ನಡೆಯಲಿರುವ ಸಭೆಯ ಫಲಶ್ರುತಿಗೆ ಕಾಯುವುದಾಗಿ ತಮಿಳುನಾಡಿನ ಮುಖ್ಯಮಂತ್ರಿ ಜೆ. ಜಯಲಲಿತಾ ಹೇಳಿದ್ದಾರೆ.
ಕರ್ನಾಟಕ ಸರಕಾರ ತಮಿಳುನಾಡಿಗೆ ನೀರು ಬಿಡಲು ನಿರಾಕರಿಸಿರುವ ಹಿನ್ನೆಲೆಯಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಿದ್ದ ಜಯಲಲಿತಾ, ಕುರುವೈ ಬೆಳೆಗೆ ಕಾವೇರಿ ನೀರು ಪಡೆಯಲು ತಾವು ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರ ನೀಡಿದರು.
ತಮ್ಮ ಮನವಿಯ ಮೇರೆಗೆ ಕೇಂದ್ರ ಜಲಸಂಪನ್ಮೂಲ ಸಚಿವಾಲಯವು ಸೆಪ್ಟೆಂಬರ್ 6ರಂದು ದೆಹಲಿಯಲ್ಲಿ ಕಾವೇರಿ ನಿಗಾ ಸಮಿತಿ ಸಭೆ ಕರೆದಿರುವ ಕಾರಣ ಈಗ ತಾವು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದ ಜಯಲಲಿತಾ, ಸಭೆಯ ಫಲಶ್ರುತಿ ಏನಾಗುತ್ತದೆ ಎಂಬ ಬಗ್ಗೆ ತಾವು ಕಾಯುವುದಾಗಿ ತಿಳಿಸಿದರು.
ಬರದ ಹಿನ್ನೆಲೆಯಲ್ಲಿ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಾಗುತ್ತಿಲ್ಲ. ಇದನ್ನು ತಮಿಳುನಾಡು ಅರ್ಥ ಮಡಿಕೊಳ್ಳಬೇಕು ಎಂಬ ಕರ್ನಾಟಕದ ಜಲ ಸಂಪನ್ಮೂಲ ಸಚಿವ ಎಚ್.ಕೆ. ಪಾಟೀಲ್ ಅವರ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ತಮಿಳುನಾಡಿನ ಲೋಕೋಪಯೋಗಿ ಸಚಿವರು ಇನ್ನೂ ಕರ್ನಾಟಕ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿಲ್ಲ ಎಂದರು.
(ಪಿ.ಟಿ.ಐ)
ಮುಖಪುಟ / ಇವತ್ತು... ಈ ಹೊತ್ತು...