ಚಕ್ರವ್ಯೂಹವೆಂಬ ಬೆಂಗಳೂರಿನಲ್ಲಿ ಒನ್ವೇ ಸರ್ಕಸ್ ಆರಂಭ..
ಬೆಂಗಳೂರು : ಒನ್ವೇ ನಗರಿ ಬೆಂಗಳೂರಿನಲ್ಲಿ ಆಗಸ್ಟ್ 26ರ ಭಾನುವಾರ ಬೆಳಗ್ಗೆಯಿಂದ ಮೊದಲ ಹಂತದ ಏಕಮುಖ ಸಂಚಾರ ವ್ಯವಸ್ಥೆ ಜಾರಿಗೆ ಬಂದಿದೆ. ಹಡ್ಸನ್ ವೃತ್ತ, ಪುರಭವನ, ಪೊಲೀಸ್ ಕಾರ್ನ್ರ್, ಸಿದ್ಧಲಿಂಗಯ್ಯ ವೃತ್ತ ಮೊದಲಾದ ಕಡೆಗಳಲ್ಲಿನ ಸಂಚಾರದ ಒತ್ತಡವನ್ನು ನಿಯಂತ್ರಿಸಲು ಈ ಹೊಸ ವ್ಯವಸ್ಥೆ ಜಾರಿಗೆ ತರಲಾಗಿದೆ.
ಈ ಸಂಬಂಧ ಶನಿವಾರ ರಾತ್ರಿಯಿಡೀ ಬೆಂಗಳೂರು ಸಂಚಾರಿ ಪೊಲೀಸರು ಸಿದ್ಧತೆಗಳನ್ನು ನಡೆಸಿದರು. ಏಕಮುಖ ಸಂಚಾರ ವ್ಯವಸ್ಥೆ ಜಾರಿಗೆ ತರಲಾಗಿರುವ ರಸ್ತೆಗಳಲ್ಲಿ ಫಲಕಗಳನ್ನು ನೆಡುವ ಕಾಮಗಾರಿ ಭರದಿಂದ ಸಾಗಿತ್ತು. ನೃಪತುಂಗ ರಸ್ತೆ, ಕೆ.ಜಿ. ರಸ್ತೆ, ಕಸ್ತೂರಿಬಾ ರಸ್ತೆ, ಮಲ್ಯ ಆಸ್ಪತ್ರೆ ರಸ್ತೆ, ರಾಜಾರಾಮ್ ಮೋಹನ್ರಾಯ್ ರಸ್ತೆ, ದೇವಾಂಗ ಹಾಸ್ಟೆಲ್ ರಸ್ತೆ, ಎನ್.ಆರ್. ರಸ್ತೆ, ಹಳೆ ಅಂಚೆ ಕಚೇರಿ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಫಲಕ ಹಾಕಲಾಗಿದೆ.
1 ವಾರ ದಂಡ ಇಲ್ಲ : ದೊಡ್ಡ ಪ್ರಮಾಣದಲ್ಲಿ ಬೆಂಗಳೂರಿನ ಹಲವು ರಸ್ತೆಗಳನ್ನು ಒನ್ ವೇ ಮಾಡಲಾಗಿದ್ದು, ಸಾರ್ವಜನಿಕರಿಗೆ ತತ್ಕ್ಷಣ ಇದನ್ನು ಅರ್ಥೈಸಿಕೊಳ್ಳುವುದು ಕಷ್ಟವಾದ ಕಾರಣ ಮೊದಲ ಒಂದು ವಾರ ನಿಯಮ ಉಲ್ಲಂಘಿಸುವ ವಾಹನ ಚಾಲಕರ ವಿರುದ್ಧ ಮೊಕದ್ದಮೆ ದಾಖಲಿಸದಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾದ ವಿ.ವಿ. ಭಾಸ್ಕರ್ ಸೂಚಿಸಿದ್ದಾರೆ.
ವಾರದ ತರುವಾಯ ಒನ್ವೇನಲ್ಲಿ ಹೋದರೆ, 300 ರುಪಾಯಿ ದಂಡ ನೀಡಬೇಕಾದೀತು ಎಚ್ಚರ. ಈ ಒಂದು ವಾರದ ಅವಧಿಯಲ್ಲಿ ಪೊಲೀಸರು ಸಾರ್ವಜನಿಕರಿಗೆ ಏಕ ಮುಖ ಸಂಚಾರ ವ್ಯವಸ್ಥೆಯ ಉದ್ದೇಶ ಹಾಗೂ ಅದರ ಮಹತ್ವವನ್ನು ತಿಳಿಸಲಿದ್ದಾರೆ.
ಸಂಚಾರಿ ವಲಯ : ಈ ಮಧ್ಯೆ ಆಡಳಿತದ ದೃಷ್ಟಿಯಿಂದ ಬೆಂಗಳೂರಿನ 100 ಕಿ.ಮೀಟರ್ ರಸ್ತೆಗಳನ್ನು 5 ಪ್ರದೇಶಗಳಾಗಿ ವಿಂಗಡಿಸಲಾಗಿದೆ. ಈ ವಿಭಾಗೀಕರಣದ ರೀತ್ಯ ಮೆಜೆಸ್ಟಿಕ್ ಪ್ರದೇಶ, ಸುಬೇದಾರ್ ಛತ್ರಂ ರಸ್ತೆ, ನಾಗಪ್ಪ ರಸ್ತೆ, ನೆಹರು ರಸ್ತೆ, ಶಿವಾನಂದ ವೃತ್ತ, ರೇಸ್ಕೋರ್ಸ್ ರಸ್ತೆ ಮೊದಲಾದವು ಆನಂದರಾವ್ ವೃತ್ತದ ಪ್ರದೇಶದ ವ್ಯಾಪ್ತಿಗೆ ಬರಲಿವೆ.
ಕೆ.ಆರ್. ವೃತ್ತ, ನೃಪತುಂಗ ರಸ್ತೆ, ಜಿಲ್ಲಾಧಿಕಾರಿ ಕಚೇರಿ ರಸ್ತೆ, ಅಂಚೆ ಕಚೇರಿ ರಸ್ತೆ, ಹಡ್ಸನ್ ವೃತ್ತ ಕಸ್ತೂರಿಬಾ ರಸ್ತೆ, ವಿಠಲ್ ಮಲ್ಯ ರಸ್ತೆ, ಆರ್.ಆರ್.ಎಂ.ಆರ್ ರಸ್ತೆ ಮೊದಲಾದವು ಹಡ್ಸನ್ ವೃತ್ತ ಪ್ರದೇಶದ ವ್ಯಾಪ್ತಿಗೂ, ಅರಮನೆ ತಿರುವು ರಸ್ತೆ, ಮಿಲ್ಲರ್ ರಸ್ತೆ, ಕ್ವೀನ್ಸ್ ರಸ್ತೆ, ಕನ್ನಿಂಗ್ ಹ್ಯಾಂ ರಸ್ತೆ, ಬಾಳೆಕುಂದ್ರಿ ವೃತ್ತ, ರಾಜಭವನ ರಸ್ತೆ, ಟಿ. ಚೌಡಯ್ಯ ರಸ್ತೆ, ಬಸವೇಶ್ವರ ವೃತ್ತ ಮೊದಲಾದವು ಕ್ವಿನ್ಸ್ ರಸ್ತೆ ವಲಯಕ್ಕೂ ಬರಲಿವೆ.
ಕಬ್ಬನ್ ರಸ್ತೆ, ಇನ್ಫ್ಯಾಂಟ್ರೀ ರಸ್ತೆ, ಎಂ.ಜಿ. ರಸ್ತೆ, ಟ್ರಿನಿಟಿ ವೃತ್ತ, ರೆಸಿಡೆನ್ಸಿ ರಸ್ತೆ, ರಿಚ್ಮಂಡ್ ರಸ್ತೆ ಹಾಗೂ ಅಲಸೂರು ರಸ್ತೆಗಳು ಎಂ.ಜಿ. ರಸ್ತೆ ವಲಯಕ್ಕೂ, ಆರ್.ವಿ. ರಸ್ತೆ, ಸಮಾನಾಂತರ ರಸ್ತೆ, ವಾಣಿ ವಿಲಾಸ್ ರಸ್ತೆ, ಮಿನರ್ವಾ ರಸ್ತೆ, ಮೊದಲಾದವು ಮಿನರ್ವಾ ವೃತ್ತ ವಲಯಕ್ಕೂ ಸೇರಲಿವೆ. ಮುಂದಿನ ಹಂತಗಳಲ್ಲಿ ಈ ವಲಯಗಳಲ್ಲೂ ಏಕಮುಖ ಸಂಚಾರ ವ್ಯವಸ್ಥೆಯನ್ನು ಪರಿಷ್ಕರಿಸುವ ಉದ್ದೇಶ ಬೆಂಗಳೂರು ಮಹಾನಗರದ ಪೊಲೀಸರಿಗಿದೆ.
ಮುಖಪುಟ / ಇವತ್ತು... ಈ ಹೊತ್ತು...