ಕಾವೇರಿಯಿಂದ 17 ಟಿಎಂಸಿ ನೀರು ಬಿಡುಗಡೆಗೆ ಜಯಲಲಿತಾ ಒತ್ತಾಯ
ಬೆಂಗಳೂರು : ನ್ಯಾಯಾಧಿಕರಣದ ತೀರ್ಪಿನ ಪ್ರಕಾರ ಕರ್ನಾಟಕದಿಂದ ತಮಿಳುನಾಡಿಗೆ ಇನ್ನೂ 17 ಟಿ.ಎಂ.ಸಿ. ನೀರು ಬಾಕಿ ಇದ್ದು, ಕುರುವೈ ಬೆಳೆ ರಕ್ಷಣೆಗೆ 10 ದಿನದೊಳಗೆ 17 ಟಿ.ಎಂ.ಸಿ. ನೀರು ಬಿಡುವಂತೆ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಒತ್ತಾಯಿಸಿದ್ದಾರೆ.
ರಾಜ್ಯದ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರಿಗೆ ಈ ಸಂಬಂಧ ಜಯಲಲಿತಾ ಪತ್ರವನ್ನೂ ಬರೆದಿದ್ದಾರೆ. ಪತ್ರ ಗುರುವಾರ ಮುಖ್ಯಮಂತ್ರಿಗಳಿಗೆ ತಲುಪಿದ್ದು, ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಈ ಬೇಡಿಕೆಯನ್ನು ಕೃಷ್ಣ ಸಾರಾಸಗಟಾಗಿ ತಿರಸ್ಕರಿಸಿದ್ದಾರೆ.
ಗುರುವಾರ ಸಂಜೆ ನಡೆದ ಸಚಿವ ಸಂಪುಟದ ಸಭೆಯಲ್ಲೂ ಈ ವಿಷಯ ಪ್ರಸ್ತಾಪವಾಗಿದ್ದು, ಭೀಕರ ಬರ ಎದುರಿಸುತ್ತಿರುವ ರಾಜ್ಯದ ಜಲಾಶಯಗಳೇ ಒಣಗಿರುವಾಗ ತಮಿಳುನಾಡಿಗೆ ನೀರು ಬಿಡಬಾರದು ಎಂಬ ತೀರ್ಮಾನವನ್ನೂ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
28ರಂದು ದೆಹಲಿಗೆ ಕೃಷ್ಣ : ಜಯಲಲಿತಾ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ತರುವಾಯ ಕಾವೇರಿ ನೀರಿಗೆ ಆಗ್ರಹಿಸಿ ಬರೆದಿರುವ ಎರಡನೇ ಪತ್ರ ಇದಾಗಿದೆ. ತಮಿಳುನಾಡು ಸರಕಾರ ಪದೇ ಪದೇ ಕಾವೇರಿ ನೀರಿಗಾಗಿ ಬೇಡಿಕೆ ಸಲ್ಲಿಸುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ಕಣಿವೆ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಪ್ರಧಾನಿ ಅಟಲ್ ಅವರಿಗೆ ವಾಸ್ತವ ಸ್ಥಿತಿ ವಿವರಿಸಲು ಮುಖ್ಯಮಂತ್ರಿ ಕೃಷ್ಣ ಇದೇ 28ರಂದು ದೆಹಲಿಗೆ ತೆರಳುತ್ತಿದ್ದಾರೆ.
ಕಾವೇರಿ ಕಣಿವೆಯಲ್ಲಿರುವ ರಾಜ್ಯದ ಐದು ಜಲಾಶಯಗಳ ಪೈಕಿ ನಾಲ್ಕರಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿದಿದೆ. ರಾಜ್ಯ ಮುಂಗಾರು ಮಳೆ ವೈಫಲ್ಯದಿಂದ ಕಂಗೆಟ್ಟಿದೆ. ಮುಂದೆ ಮಳೆಯಾಗಿ ಜಲಾಶಯಗಳಿಗೆ ಒಳಹರಿವು ಹೆಚ್ಚಿದಲ್ಲಿ ತಮಿಳುನಾಡು ಕೋರಿಕೆಯನ್ನು ಈಡೇರಿಸಲಾಗುವುದು ಎಂದು ಕೃಷ್ಣ ಪ್ರಧಾನಿಯವರಿಗೆ ತಿಳಿಸಲಿದ್ದಾರೆ.
ಕಾವೇರಿ ನೀರಿನ ವಿಷಯ ಮತ್ತೆ ವಿವಾದವಾಗಿ ಪರಿಣಮಿಸುವ ಮೊದಲೇ ಕರ್ನಾಟಕ, ತಮಿಳುನಾಡು, ಪಾಂಡಿಚೇರಿ ಮತ್ತು ಕೇರಳ ಮುಖ್ಯಮಂತ್ರಿಗಳ ಸಭೆ ಕರೆದು ಚರ್ಚಿಸುವಂತೆ ಕೂಡ ಅವರು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಒತ್ತಾಯಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ಹೇಳಿವೆ.
ಜಯಾ ಪತ್ರದ ಸಾರಾಂಶ : ಮೆಟ್ಟೂರು ಜಲಾಶಯದಲ್ಲಿ ಈ ಹೊತ್ತು ಕೇವಲ 55 ಟಿ.ಎಂ.ಸಿ. ನೀರಿದ್ದು, ಇದು ಬೆಳೆದು ನಿಂತಿರುವ ಕುರುವೈ ಬೆಳೆಗೆ ಸಾಕಾಗುವುದಿಲ್ಲ. ಹೀಗಾಗಿ 17 ಟಿ.ಎಂ.ಸಿ. ನೀರನ್ನು ಕೂಡಲೇ ಬಿಡುಗಡೆ ಮಾಡಿ, ಈ ಸಂಬಂಧ ಮಾತುಕತೆ ನಡೆಸಲು ನಮ್ಮ ನೀರಾವರಿ ಸಚಿವರು, ಇಲಾಖೆ ಕಾರ್ಯದರ್ಶಿಗಳನ್ನು ಕರ್ನಾಟಕಕ್ಕೆ ಕಳುಹಿಸಲು ತಮಿಳುನಾಡು ಸರಕಾರ ಇಚ್ಛಿಸಿದ್ದು, ಇದಕ್ಕೆ ದಿನಾಂಕ ನಿಗದಿ ಪಡಿಸಿ ಎಂದೂ ಜಯಾ ತಮ್ಮ ಪತ್ರದಲ್ಲಿ ಕೋರಿದ್ದಾರೆ.