ಗೊರೂರು ಅಣೆಕಟ್ಟೆ ಭರ್ತಿಯಾಗಲು 8 ಅಡಿ ನೀರುಮಾತ್ರ ಸಾಕು
ಹಾಸನ : ಯೋಗನರಸಿಂಹಸ್ವಾಮಿಯ ಪುಣ್ಯಕ್ಷೇತ್ರದಲ್ಲಿರುವ ಗೊರೂರಿನ ಹೇಮಾವತಿ ಅಣೆಕಟ್ಟೆ ತುಂಬಲು ಇನ್ನು ಕೇವಲ 8 ಅಡಿ ಮಾತ್ರ ನೀರು ಸಾಕು. ಹೇಮಾವತಿ ಜಲಾನಯನ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಸುರಿದ ಮಳೆಯಿಂದಾಗಿ ಜಲಾಶಯದ ನೀರಿನ ಮಟ್ಟ ದಿನದಿಂದ ದಿನಕ್ಕೆ ಏರುತ್ತಿದೆ.
2922 ಅಡಿ ಗರಿಷ್ಠ ಮಟ್ಟದ ಗೊರೂರು ಅಣೆಕಟ್ಟೆಯಲ್ಲಿ ಈ ಹೊತ್ತು 2914.14 ಅಡಿ ನೀರಿದ್ದು, ಜಲಾಶಯ ಪೂರ್ಣಮಟ್ಟ ತಲುಪಲು 8 ಅಡಿ ನೀರಷ್ಟೇ ಸಾಕಾಗಿದೆ. ಜಲಾಶಯಕ್ಕೆ ಬರುತ್ತಿರುವ ನೀರಿನ ಒಳಹರಿವು ಹೆಚ್ಚಿರುವ ಹಿನ್ನೆಲೆಯಲ್ಲಿ ಸದ್ಯ 7ಸಾವಿರ ಕ್ಯೂಸೆಕ್ಸ್ ನೀರನ್ನು ಜಲಾಶಯದಿಂದ ಹೊರಬಿಡಲಾಗುತ್ತಿದೆ.
ಹೋದವರ್ಷಕ್ಕೆ ಹೋಲಿಸಿದರೆ, ಈ ವರ್ಷ ಗೊರೂರು ಜಲಾಶಯ ಸ್ಪಲ್ಪ ತಡವಾಗಿ ತುಂಬುತ್ತಿದೆಯಾದರೂ, ಬರದಿಂದ ತತ್ತರಿಸಿರುವ ರಾಜ್ಯದಲ್ಲಿ ಹೇಮಾವತಿ ತುಂಬಿರುವ ಸುದ್ದಿ ಹಾಸನ ಜಿಲ್ಲೆಯ ರೈತರಿಗೆ ಸಂತಸ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಗೊರೂರು ಯೋಗಾನರಸಿಂಹ ಸ್ವಾಮಿಗೆ ವಿಶೇಷ ಪೂಜೆಗಳನ್ನೂ ಭಕ್ತರು ಮಾಡಿಸುತ್ತಿದ್ದಾರೆ.
ಹೋದವರ್ಷ ಆಗಸ್ಟ್ 27ರಂದು ಜಲಾಶಯ ಪೂರ್ಣ ತುಂಬಿತ್ತು. ಆಗ 25 ಸಾವಿರ ಕ್ಯೂಸೆಕ್ಸ್ನಷ್ಟು ನೀರನ್ನು ಹೊರಬಿಡಲಾಗುತ್ತಿತ್ತು. 1998ರಲ್ಲಿ ಜಲಾಶಯ ತುಂಬಿದ್ದು, ಸೆಪ್ಟೆಂಬರ್ 16ರಂದು. 97ರಲ್ಲಿ ಆಗಸ್ಟ್ 8ರಂದೇ ಜಲಾಶಯ ಭರ್ತಿ ಆಗಿತ್ತು. ಆದರೆ, 1996ರಲ್ಲಿ ಜಲಾಶಯ ಭರ್ತಿಯಾಗಲೇ ಇಲ್ಲ. ಆ ವರ್ಷ ಸಂಗ್ರಹವಾಗಿದ್ದು 2912 ಅಡಿ ನೀರು ಮಾತ್ರ.
(ಇನ್ಫೋ ವಾರ್ತೆ)
ವಾರ್ತಾಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...