ಹಂಪೆ, ಬನವಾಸಿ, ಗಡಿನಾಡು, ಪಟ್ಟದಕಲ್ಲು, ಕರಾವಳಿ,ಕದಂಬೋತ್ಸವ ರದ್ದು
ಬೆಂಗಳೂರು : ರಾಜ್ಯ ಭೀಕರ ಬರ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ನಾಡಹಬ್ಬ ಮೈಸೂರು ದಸರೆಯನ್ನು ಸರಳವಾಗಿ ಆಚರಿಸಲು ನಿರ್ಧರಿಸಿರುವ ಸರಕಾರ ಹಂಪೆ ಉತ್ಸವ, ಕರಾವಳಿ ಉತ್ಸವ, ಕದಂಬೋತ್ಸವ, ಗಡಿನಾಡ ಉತ್ಸವ, ಬನವಾಸಿ ಉತ್ಸವ, ಪಟ್ಟದಕಲ್ಲ ಉತ್ಸವಗಳನ್ನು ರದ್ದು ಪಡಿಸಲು ತೀರ್ಮಾನಿಸಿದೆ.
ಬರದ ಹಿನ್ನೆಲೆಯಲ್ಲಿ ಎಲ್ಲ ವಿಶೇಷ ಉತ್ಸವಗಳನ್ನೂ ರದ್ದು ಪಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಲಾಗಿದೆ. ಈ ವಿಷಯವನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವೆ ರಾಣಿ ಸತೀಶ್ ತಿಳಿಸಿದ್ದಾರೆ. ದಸರ ಉತ್ಸವದ ಉನ್ನತ ಮಟ್ಟದ ಕಾರ್ಯಕಾರಿ ಸಮಿತಿ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ದಸರಾ ಉತ್ಸವಕ್ಕೆ ಸರಕಾರ 73 ಲಕ್ಷ ರುಪಾಯಿಗಳನ್ನು ಬಿಡುಗಡೆ ಮಾಡಿದೆ. ಆದರೆ, ಈ ಹಣದಲ್ಲಿ ಕೇವಲ 30 ಲಕ್ಷ ರುಪಾಯಿಗಳನ್ನು ಮಾತ್ರ ದಸರೆಗೆ ಖರ್ಚು ಮಾಡಲು ನಿರ್ಧರಿಸಲಾಗಿದೆ ಎಂದರು.
ರಾಜ್ಯ ಬರ ಪರಿಸ್ಥಿತಿ ಎದುರಿಸುತ್ತಿರುವುದರಿಂದ ದಸರೆಯ ಖರ್ಚನ್ನು ಕಡಿಮೆ ಮಾಡಿ, ಉಳಿಸಿದ ಹಣದಲ್ಲಿ ಬರ ಪರಿಹಾರ ಕಾಮಗಾರಿ ಕೈಗೊಳ್ಳಲು ನಿರ್ಧರಿಸಲಾಗಿದೆ. ಆದರೆ, ದಸರೆಯ ಪದ್ಧತಿಗಳಿಗೆ - ಸಂಪ್ರದಾಯಕ್ಕೆ ಚ್ಯುತಿ ಬಾರದಂತೆ ಸರಳವಾಗಿ ಆಚರಿಸಲಾಗುವುದು ಎಂದೂ ಅವರು ಹೇಳಿದರು.
ವಾರ್ತಾಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...