ಸಾರಿ ಮೇಡಂ ಜಯಲಲಿತಾ! ಆ.25ರಂದು ಕಾವೇರಿ ಚರ್ಚೆ ಸಾಧ್ಯವಿಲ್ಲ !
ಬೆಂಗಳೂರು : ತಮಿಳುನಾಡಿನ ಕೋರಿಕೆಯ ಮೇರೆಗೆ ಕಾವೇರಿ ನೀರು ಬಿಡುಗಡೆ ಕುರಿತು ಚರ್ಚಿಸಲು ಶೀಘ್ರವೇ ದಿನಾಂಕವನ್ನು ರಾಜ್ಯ ಸರ್ಕಾರ ನಿಗದಿ ಪಡಿಸಲಿದೆ ಎಂದು ಜಲ ಸಂಪನ್ಮೂಲ ಸಚಿವ ಎಚ್.ಕೆ.ಪಾಟೀಲ್ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.
ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ನಗರದಲ್ಲಿ ಇರುವುದನ್ನು ಗಮನಿಸಿಕೊಂಡು ಸಭೆಯ ದಿನಾಂಕವನ್ನು ನಿಗದಿಪಡಿಸಲಾಗುವುದು. ತಮಿಳುನಾಡಿನ ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ಕೃಷ್ಣ ಅವರಿಗೆ ಬರೆದಿರುವ ಪತ್ರದಲ್ಲಿ - ತಮ್ಮ ರಾಜ್ಯದ ನೀರಾವರಿ ಸಚಿವರು ಹಾಗೂ ನೀರಾವರಿ ಇಲಾಖೆಯ ಕಾರ್ಯದರ್ಶಿಗಳು ಆಗಸ್ಟ್ 25 ಅಥವಾ 26 ರಂದು ಭೇಟಿಯಾಗಲು ಇಚ್ಛಿಸಿರುವುದಾಗಿ ತಿಳಿಸಿದ್ದರು ಎಂದು ಬರೆದಿರುವುದಾಗಿ ಪಾಟೀಲ್ ಹೇಳಿದರು.
ಆಗಸ್ಟ್ 25 ರಂದು, ಸಹಕಾರಿ ನೀತಿಗೆ ತಿದ್ದುಪಡಿ ತರುವ ಕುರಿತು ಪ್ರಧಾನಿ ವಾಜಪೇಯಿ ಕರೆದಿರುವ ಮುಖ್ಯಮಂತ್ರಿಗಳ ಸಭೆಯಲ್ಲಿ ಕೃಷ್ಣ ಭಾಗವಹಿಸುತ್ತಿದ್ದಾರೆ. ತಾವು ಕೂಡ ಆಗಸ್ಟ್ 25 ರ ಶನಿವಾರ ಬರ ಪರಿಹಾರ ಕಾಮಗಾರಿಗಳ ಸಮೀಕ್ಷೆ ನಡೆಸಲು ಹುಬ್ಬಳ್ಳಿಗೆ ತೆರಳುತ್ತಿರುವ ಕಾರಣ, ಜಯಲಲಿತಾ ಸೂಚಿಸಿರುವ ದಿನಾಂಕಗಳನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ . ಕೃಷ್ಣ ಅವರು ದೆಹಲಿಯಿಂದ ವಾಪಸ್ಸಾದ ನಂತರ ಸೂಕ್ತ ದಿನಾಂಕವನ್ನು ನಿಗದಿಪಡಿಸಲಾಗುವುದು ಎಂದು ಪಾಟೀಲ್ ತಿಳಿಸಿದರು.
ಬರ ಪರಿಸ್ಥಿತಿಯಿದ್ದರೂ ಮೆಟ್ಟೂರು ಜಲಾಶಯಕ್ಕೆ ಬಿಡುಗಡೆ ಮಾಡಲು ಕರ್ನಾಟಕದ ಬಳಿ ಸಾಕಷ್ಟು ನೀರಿದೆ ಎನ್ನುವ ಜಯಲಲಿತಾ ಅವರ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಲು ಪಾಟೀಲ್ ನಿರಾಕರಿಸಿದರು.
(ಪಿಟಿಐ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...