ಕೋಲಾರ: ಗೋಪುರ ಕುಸಿದು ತಮಿಳುನಾಡಿನ 6 ಕಾರ್ಮಿಕರ ಸಾವು
ಕೋಲಾರ : ವಿದ್ಯುತ್ ಸರಬರಾಜು ಗೋಪುರ ಕುಸಿದುಬಿದ್ದ ಪರಿಣಾಮ ಆರು ಮಂದಿ ಸಾವಿಗೀಡಾದ ದುರಂತ ಇಲ್ಲಿಗೆ ಮೂರು ಕಿಮೀ ದೂರದ ಕೋಡಿಕಣ್ಣೂರು ಗ್ರಾಮದಲ್ಲಿ ಗುರುವಾರ ಸಂಭವಿಸಿದೆ. ಮೂವರು ಸ್ಥಳದಲ್ಲೇ ಹೆಣವಾದರೆ, ಉಳಿದ ಮೂವರು ಸರ್ಕಾರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಹ್ಯುಂಡೈ ನಿರ್ಮಾಣ ಕಂಪನಿ(hyundai construction company)ಯ ಕಾಮಗಾರಿಯಡಿ, ಗೋಪುರವನ್ನು ನಿಲ್ಲಿಸುತ್ತಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ. ನೆಲದಿಂದ 100 ಅಡಿ ಎತ್ತರವಿರುವ ಈ ಗೋಪುರದ ಶಿಖರ ಭಾಗದಲ್ಲಿ ಕೆಲಸ ನಡೆಯುತ್ತಿದ್ದ ಸಂದರ್ಭದಲ್ಲಿ ಗೋಪುರ ಕುಸಿದು, ಆರು ಮಂದಿ ಕಾರ್ಮಿಕರು ನಿಧನರಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಇತರ ಇಬ್ಬರು ಕಾರ್ಮಿಕರನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾವಿಗೀಡಾದ ಎಲ್ಲರೂ ತಮಿಳುನಾಡಿನ ಧರ್ಮಪುರಿ ಜಿಲ್ಲೆಗೆ ಸೇರಿದವರಾಗಿದ್ದಾರೆ. ರಾಜಗೋಪಾಲ್(26), ನಾಗರಾಜ್ (26), ಪಿ.ವೆಂಕಟಾಚಲಂ (30), ಸೆಲ್ವಂ (28), ಮುರುಗೇಶನ್(30) ಹಾಗೂ ಮಥಿಯಲಗನ್(23) ಎಂದು ಸಾವಿಗೀಡಾದವರನ್ನು ಗುರ್ತಿಸಲಾಗಿದೆ. ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
(ಪಿಟಿಐ)