ಭ್ರಷ್ಟಾಚಾರ ಬಯಲಿಗೆಳೆಯಲು ಬೆಲೆವೆಣ್ಣುಗಳ ಬಳಕೆ : ತೆಹಲ್ಕಾ ಸಮರ್ಥನೆ
ನವದೆಹಲಿ : ರಾಷ್ಟ್ರದ ಅತಿ ಸೂಕ್ಷ್ಮ ಕ್ಷೇತ್ರವಾದ ರಕ್ಷಣಾ ಇಲಾಖೆಯ ಶಸ್ತ್ರಾಸ್ತ್ರ ಖರೀದಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಬಯಲಿಗೆಳೆಯಲು ತಾವು ಬೆಲೆವೆಣ್ಣುಗಳನ್ನು ಬಳಸಿಕೊಂಡಿರುವುದನ್ನು ತರುಣ್ ತೇಜ್ಪಾಲ್ ಸಮರ್ಥಿಸಿಕೊಂಡಿದ್ದಾರೆ.
ವೇಶ್ಯೆಯರನ್ನು ಬಳಸಿಕೊಂಡು ರಕ್ಷಣಾ ಅಧಿಕಾರಿಗಳೊಂದಿಗೆ ವ್ಯವಹಾರ ನಡೆಸಲು ತಮಗೂ ಮುಜುಗರವಾಗಿತ್ತು. ಆದರೆ, ಇದರ ಹಿಂದಿನ ಉದ್ದೇಶ ಭ್ರಷ್ಟಾಚಾರ ಬಯಲಿಗೆಳೆಯುವುದಾಗಿತ್ತೇ ಹೊರತು, ಲೈಂಗಿಕ ಹಗರಣ ಬಯಲಿಗೆಳೆಯುವುದಾಗಿರಲಿಲ್ಲ ಎಂದು ತೆಹಲ್ಕಾ ಸಂಪಾದಕ ತರುಣ್ ತೇಜ್ಪಾಲ್ ಹೇಳಿದ್ದಾರೆ.
ನಾಲ್ಕು ತಿಂಗಳ ಹಿಂದೆ ಲಂಚ ಪ್ರಕರಣ ಬಯಲು ಮಾಡಿ ಸುದ್ದಿ ಮಾಡಿದ್ದ ತೆಹಲ್ಕಾ ಈಗ ವೇಶ್ಯೆಯರನ್ನು ಬಳಸಿಕೊಂಡ ಬಗ್ಗೆ ಸರ್ವತ್ರ ಟೀಕೆಗೆ ಗುರಿಯಾಗಿದೆ. ಪಕ್ಷಭೇದ ಮರೆತು ರಾಜಕೀಯ ಮುಖಂಡರು ತೆಹಲ್ಕಾದ ಈ ನಡೆ ದೇಶದ್ರೋಹದ ಕೃತ್ಯವಾಗಿದೆ ಎಂದು ಬಣ್ಣಿಸಿದ್ದಾರೆ. ತೆಹಲ್ಕಾ ಸಂಪಾದಕರ ಬಂಧನಕ್ಕೆ ಒತ್ತಾಯಗಳು ಕೇಳಿಬಂದಿವೆ.
ಬುಧವಾರ ರಾಷ್ಟ್ರದ ಪ್ರಮುಖ ಪತ್ರಿಕೆಗಳು ಲಂಚ ಪ್ರಕರಣ ಬಯಲು ಮಾಡಲು ರಕ್ಷಣಾ ಅಧಿಕಾರಿಗಳಿಗೆ ತೆಹಲ್ಕಾ ವೇಶ್ಯೆಯರ ಆಮಿಷ ಒಡ್ಡಿತ್ತು ಎಂದು ವರದಿ ಮಾಡಿತ್ತು. ಈ ವರದಿ ಲೋಕಸಭೆಯಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಯಿತು. ಆಡಳಿತ ಪಕ್ಷದ ಸದಸ್ಯರು ತೆಹಲ್ಕಾ ಸಂಪಾದಕರ ಬಂಧನಕ್ಕೆ ಆಗ್ರಹಿಸಿ ಗದ್ದಲ ಎಬ್ಬಿಸಿದಾಗ ಲೋಕಸಭಾಧ್ಯಕ್ಷ ಜಿ.ಎಂ.ಸಿ. ಬಾಲಯೋಗಿ ಅವರು ಸದನವನ್ನು ಗುರುವಾರಕ್ಕೆ ಮುಂಡೂಡಿದರು.
ಜಾರ್ಜ್ ಖಂಡನೆ : ಲಂಚ ಹಗರಣ ಬಯಲಿಗೆಳೆಯುವ ಹೆಸರಿನಲ್ಲಿ ವೇಶ್ಯೆಯರನ್ನು ಬಳಸಿಕೊಂಡಿರುವ ತೆಹಲ್ಕಾದ ಕ್ರಮವನ್ನು ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ತೀವ್ರವಾಗಿ ಖಂಡಿಸಿದ್ದಾರೆ. ಸಂಪಾದಕರನ್ನು ಬಂಧಿಸುವಂತೆ ಅವರು ಒತ್ತಾಯಿಸಿದ್ದಾರೆ.
ವಾರ್ತಾಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...