‘ಇನ್ನೊಮ್ಮೆ ಕೈ ಸುಟ್ಟುಕೊಳ್ಳುವ ತಪ್ಪು ಮಾಡುವುದಿಲ್ಲ ’-ಅಮಿತಾಬ್ ಬಚ್ಚನ್
ಮುಂಬಯಿ : ‘ಇನ್ನೆಂದೂ ರಾಜಕೀಯಕ್ಕೆ ಬರುವುದಿಲ್ಲ ’. ತುಸು ನಾಚಿಕೆಯಿಂದಲೇ ರಾಜಕೀಯದ ಬಗೆಗಿನ ತಮ್ಮ ಅಸಹನೆ, ಅಸಮಾಧಾನವನ್ನು ಬಿಗ್ ಬಿ, ಅಮಿತಾಬ್ ಬಚ್ಚನ್ ತೋಡಿಕೊಂಡರು.
‘ಈಗಾಗಲೇ ನಾನೊಮ್ಮೆ ಕೈ ಸುಟ್ಟು ಕೊಂಡಿದ್ದೇನೆ. ಇನ್ನೊಮ್ಮೆ ಅದೇ ತಪ್ಪು ಮಾಡಲು ಬಯಸುವುದಿಲ್ಲ ’ ಎಂದು ಯುಎನ್ಐಗೆ ನೀಡಿರುವ ಸಂದರ್ಶನದಲ್ಲಿ ಅಮಿತಾಬ್ ಹೇಳಿರುವುದಾಗಿ ಸಿಫಿ.ಕಾಂ ವರದಿ ಮಾಡಿದೆ. ಗೆಳೆಯ ಸಮಾಜವಾದಿ ಪಕ್ಷದ ಅಮರ್ಸಿಂಗ್ ಪರವಾಗಿ ಉತ್ತರ ಪ್ರದೇಶದ ಚುನಾವಣೆಯಲ್ಲಿ ಪ್ರಚಾರ ಮಾಡುವ ಕುರಿತಾದ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.
ಅಮರ್ಸಿಂಗ್ ಗೆಳೆಯನಿಗಿಂತ ಮಿಗಿಲಾದವ, ನನ್ನ ಕಿರಿಯ ಸೋದರನಿದ್ದಂತೆ. ಆತ ಕೇಳಿದರೆ ನಾನು ಏನನ್ನಾದರೂ ಮಾಡಲು ಸಿದ್ಧ . ಆದರೆ, ನನ್ನಿಂದ ಸಾಧ್ಯವಾಗದೆ ಹೋಗುವುದನ್ನು ಆತ ಅಪೇಕ್ಷಿಸುವುದಿಲ್ಲ ಎನ್ನುವ ಬಗೆಗೆ ತಮಗೆ ಭರವಸೆ ಇದೆ ಎಂದು ಅಮಿತಾಬ್ ಹೇಳಿದರು. ಈ ಮೂಲಕ ಉತ್ತರಪ್ರದೇಶದ ವಿಧಾನಸಭೆ ಚುನಾವಣೆಯ ಪ್ರಚಾರ ಕಣದಲ್ಲಿ ಭಾಗವಹಿಸದಿರುವ ಇಂಗಿತವನ್ನು ಅವರು ವ್ಯಕ್ತಪಡಿಸಿದರು.
ಗೆಳೆಯರಿಗೆ ಎಂದೂ ಇಲ್ಲ ಎಂದು ಹೇಳಿ ಅಭ್ಯಾಸವಿಲ್ಲದ ಅಮಿತಾಬ್, ಅಮರ್ಸಿಂಗ್ ಪರವಾಗಿ ಚುನಾವಣೆಯಲ್ಲಿ ಪ್ರಚಾರ ಮಾಡುವರೆಂದು ಈ ಮುನ್ನ ವರದಿಯಾಗಿತ್ತು . ಮಾಜಿ ಪ್ರಧಾನಿ ಹಾಗೂ ಬಾಲ್ಯದ ಗೆಳೆಯ ರಾಜೀವ್ಗಾಂಧಿ ಒತ್ತಾಯದ ಮೇರೆಗೆ ಈ ಮುನ್ನ ರಾಜಕೀಯಕ್ಕೆ ಅಮಿತಾಬ್ ಪ್ರವೇಶಿಸಿದುದನ್ನು , ಬೇಸತ್ತು ರಾಜಕೀಯ ಸನ್ಯಾಸ ಸ್ವೀಕರಿಸಿದುದನ್ನು ಇಲ್ಲಿ ಸ್ಮರಿಸಬಹುದು. 1984 ರ ಲೋಕಸಭೆ ಚುನಾವಣೆಯಲ್ಲಿ ಅಲಹಾಬಾದ್ ಕ್ಷೇತ್ರದಿಂದ ಅಮಿತಾಬ್ ಸಂಸತ್ತಿಗೆ ಆಯ್ಕೆಯಾಗಿದ್ದರು.
(ಯುಎನ್ಐ)