ವಿಶ್ವೇಶ್ವರಯ್ಯ ನಾಲೆ ಒಡೆದು 40 ಎಕರೆ ಕೃಷಿ ಜಮೀನು ಜಲಾವೃತ
ಮಂಡ್ಯ : ಪಾಂಡವಪುರ ಸಮೀಪದ ಬೇವಿನಕುಪ್ಪೆ ಗ್ರಾಮದ ಬಳಿ ವಿಶ್ವೇಶ್ವರಯ್ಯ ನಾಲೆ ಒಡೆದು, ಅಧಿಕ ಪ್ರಮಾಣದ ನೀರು ನುಗ್ಗಿದ್ದರಿಂದ ಪಾಂಡವಪುರ ಕೆರೆ ಏರಿಯೂ ಒಡೆದು ಕೆರೆಯಲ್ಲಿದ್ದ ಮೀನು ಹಾಗೂ ಲಕ್ಷಾಂತರ ರೂಪಾಯಿಯ ಭತ್ತ ಮತ್ತು ಕಬ್ಬು ಬೆಳೆ ನಾಶವಾಗಿದೆ.
ಸೋಮವಾರ ಬೆಳಗ್ಗೆ ಬೇವಿನ ಕುಪ್ಪೆ ಮೇಲು ಸೇತುವೆಯ ಏರಿ ಒಡೆದು, ನೀರು ಹಳೆಯ ಮೇಲು ಸೇತುವೆಯಡಿಯಲ್ಲಿ ಹರಿದು, ಅದರ ಪಕ್ಕದಲ್ಲಿದ್ದ ಸುಮಾರು 150 ಎಕರೆ ಪ್ರದೇಶದ ಜಮೀನು ಮುಳುಗಿದೆ. ಪಾಂಡವಪುರದ ಈರೋಡೆ ಕೆರೆಗೂ ನೀರು ನುಗ್ಗಿದ ಪರಿಣಾಮ ಕೆರೆಯ ಏರಿ ಒಡೆದು ಹೋಗಿದೆ.
ವಿಶ್ವೇಶ್ವರಯ್ಯ ನಾಲಾ ಅಚ್ಚುಕಟ್ಟು ಪ್ರದೇಶದ ಸುಮಾರು 40 ಎಕರೆ ಜಮೀನು ಜಲಾವೃತವಾಗಿದೆ. ನಾಲೆಯಲ್ಲಿ ನೀರಿನ ಹರಿವಿನ ವೇಗ ಹೆಚ್ಚಾಗಿರುವುದರಿಂದ ನಾಲೆ ಒಡೆದಿದೆ ಎಂದು ಹೇಳಲಾಗಿದೆ. 1997-98ರ ಅವಧಿಯಲ್ಲಿ ನಾಲೆಯನ್ನು ಶಕ್ತಿಯುತಗೊಳಿಸಲು ಎಂಬ್ಯಾಕ್ಮೆಂಟನ್ನು ಕಟ್ಟಲಾಗಿತ್ತು. ಆದರೆ ಅದರ ಪಕ್ಕದಲ್ಲಿಯೇ 35 ಮೀಟರ್ನಷ್ಟು ನಾಲೆ ಒಡೆದಿದೆ. ಈರೋಡೆ ಕೆರೆ ಏರಿ ಸುಮಾರು 50 ಮೀಟರ್ನಷ್ಟು ಉದ್ದಕ್ಕೆ ಒಡೆದಿದೆ. ಹೊಲಗದ್ದೆಗಳನ್ನು ಮುಳುಗಿಸಿದ ನೀರು ಬಾಬುರಾಯನ ಕೊಪ್ಪ ದ ಬಳಿ ಮತ್ತೆ ನಾಲೆಯನ್ನು ಸೇರುತ್ತಿದೆ.
ಕೃಷ್ಣ ರಾಜ ಸಾಗರದಿಂದ ವಿಶ್ವೇಶ್ವರಯ್ಯ ನಾಲೆಗೆ ನೀರು ಬಿಡುವುದನ್ನು ತಕ್ಷಣವೇ ನಿಲ್ಲಿಸಲಾಗಿದೆ. ಜಿಲ್ಲಾಧಿಕಾರಿ ಎಲ್. ಕೆ. ಅತೀಕ್, ಕೇಂದ್ರ ಸ್ಥಾನಿಕ ಸಹಾಯಕ ಶಂಕರಪ್ಪ, ಮತ್ತಿತರ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
(ಇನ್ಫೋ ವಾರ್ತೆ)