ಛೋಟಾ ಶಕೀಲ್ ಹತ್ಯೆ ಸುದ್ದಿಯಾಂದು ವದಂತಿ - ಮಹಾರಾಷ್ಟ್ರ ಸರ್ಕಾರ
ಮುಂಬಯಿ : ಭೂಗತ ದೊರೆ ದಾವೂದ್ ಇಬ್ರಾಹಿಂ ಹಾಗೂ ಆತನ ಸಹಚರ ಛೋಟಾ ಶಕೀಲ್ ಮೇಲೆ ಕರಾಚಿಯಲ್ಲಿ ಗುಂಡಿನ ದಾಳಿ ನಡೆದಿದ್ದು, ಶಕೀಲ್ ಹತ್ಯೆ ನಡೆದಿದೆ ಎಂಬ ಸುದ್ದಿಯೆಲ್ಲಾ ಕೇವಲ ವದಂತಿ ಎಂದು ಮಹಾರಾಷ್ಟ್ರ ಸರಕಾರ ಸ್ಪಷ್ಟಪಡಿಸಿದೆ.
ಆದರೆ, ಶನಿವಾರ ಪಾಕಿಸ್ತಾನದ ಕರಾಚಿಯಲ್ಲಿ ದಾವೂದ್ ಹಾಗೂ ಶಕೀಲ್ ಮೇಲೆ ವಿರೋಧಿ ಗುಂಪು ಗುಂಡಿನ ದಾಳಿ ಮಾಡಿರುವುದು ನಿಜ ಎಂದು ಮೂಲಗಳು ತಿಳಿಸಿವೆ. ಈ ಮಧ್ಯೆ ಛೋಟಾ ಶಕೀಲ್ ಭಾನುವಾರ ಸಂಜೆ ಮುಂಬಯಿಯಲ್ಲಿರುವ ತನ್ನ ಬಂಧುಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ, ತಾನು ಕ್ಷೇಮವಾಗಿರುವುದಾಗಿ ತಿಳಿಸಿದ್ದಾನೆ ಎಂದೂ ಮೂಲಗಳು ಹೇಳಿವೆ.
ಛೋಟಾ ಶಕೀಲ್ ಎಂದು ಹೇಳಿಕೊಂಡ ವ್ಯಕ್ತಿ ಟಿ.ವಿ. ಚಾನೆಲ್ನ ‘ಆಜ್ತಕ್’ನ್ನು ಸಂಪರ್ಕಿಸಿ ತಾನು ಹಾಗೂ ದಾವೂದ್ ಇಬ್ರಾಹಿಂ ಕ್ಷೇಮದಿಂದಿದ್ದೇವೆ ಎಂದು ತಿಳಿಸಿದ್ದಾನೆ. ಆದಾಗ್ಯೂ ಮುಂಬಯಿ ಮಹಾನಗರದಲ್ಲಿ ಶಕೀಲ್ ಹತ್ಯೆಯ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದ್ದು, ಸರಕಾರದ ಸ್ಪಷ್ಟೀಕರಣದ ನಡುವೆಯೂ ಅನುಮಾನಗಳು ಹೊಗೆಯಾಡುತ್ತಿವೆ.
ಈ ಹಿನ್ನೆಲೆಯಲ್ಲಿ ಮುಂಬಯಿಯಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ನಗರದಲ್ಲಿ ಇಂತಹ ಅಸಹಜ ಪರಿಸ್ಥಿತಿ ನಿರ್ಮಾಣ ಮಾಡುವಂತಹ ದುಷ್ಕರ್ಮಿಗಳನ್ನು ಹಿಡಿಯುತ್ತೇವೆ ಎಂದು ಮಹಾರಾಷ್ಟ್ರದ ಗೃಹ ಖಾತೆಯ ಸಹಾಯಕ ಸಚಿವ ಕೃಪಾ ಶಂಕರ್ ಸಿಂಗ್ ತಿಳಿಸಿದ್ದಾರೆ.
ಕರಾಚಿಯಲ್ಲಿ ಈಗ ಆಶ್ರಯ ಪಡೆದಿರುವ ಛೋಟಾ ಶಕೀಲ್ ಹಾಗೂ ಭೂಗತ ದೊರೆ ದಾವೂದ್ ಇಬ್ರಾಹಿಂ ಮೇಲೆ ಆತನ ಪ್ರತಿಸ್ಪರ್ಧಿ ಛೋಟಾ ರಾಜನ್ ತಂಡ ಗುಂಡಿನ ದಾಳಿ ನಡೆಸಿ ಹತ್ಯೆ ಪ್ರಯತ್ನ ನಡೆಸಿದೆ. ಈ ದಾಳಿಯಲ್ಲಿ ಶಕೀಲ್ ಮೃತಪಟ್ಟಿದ್ದಾನೆ ಎಂಬ ಸುದ್ದಿ ದಟ್ಟವಾಗಿ ಹಬ್ಬಿತ್ತು.
ಈ ಹಿನ್ನೆಲೆಯಲ್ಲಿ ಮುಂಬಯಿಯಲ್ಲಿ ಎರಡೂ ಗುಂಪುಗಳ ಬೆಂಬಲಿಗರ ನಡುವೆ ಭಾರಿ ಪ್ರಮಾಣದ ಘರ್ಷಣೆ ನಡೆಯಲಿದೆ ಎಂಬ ಶಂಕೆಯನ್ನು ಸಚಿವರು ನಿರಾಕರಿಸಿದ್ದಾರೆ. ಆದಾಗ್ಯೂ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಹಾಗೂ ಮುಂಬಯಿ ಮಹಾನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಕಟ್ಟೆಚ್ಚರ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...