ಆಗಸ್ಟ್ ಕೊಲೆಗಳ ಪಟ್ಟಿಗೆ ಸೇರಿದ ಬೆಂಗಳೂರಿನ ಮತ್ತೆರಡು ಕೊಲೆ
ಬೆಂಗಳೂರು : ಅಪರಾಧ ಪ್ರಕರಣಗಳ ನಿಗ್ರಹಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಆದೇಶ ನೀಡಿದ್ದರೂ ರಾಜ್ಯದಲ್ಲಿ ಮಿಗಿಲಾಗಿ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕೊಲೆ -ಸುಲಿಗೆಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿದೆ.
ದಿನ ಪತ್ರಿಕೆಯ ಯಾವುದೋ ಒಂದು ಪುಟದಲ್ಲಿ ಮಾತ್ರ ಇರುತ್ತಿದ್ದ ಅಪರಾಧ ಸುದ್ದಿಗಳು, ಆಗಸ್ಟ್ ತಿಂಗಳಿನಲ್ಲಿ ಹತ್ತಾರುಬಾರಿ ಮುಖಪುಟವನ್ನು ಅಲಂಕರಿಸಿವೆ. ಇತ್ತೀಚಿನ ದಿನಗಳಲ್ಲಿ ನಡೆದ ಕೊಲೆ -ಸುಲಿಗೆಗಳನ್ನು ನೆನೆಸಿಕೊಂಡರೇ ಮೈ ಝುಂ ಎನ್ನುತ್ತದೆ.
ಆಗಸ್ಟ್ 18ರಂದು ಪೊಲೀಸರ ಕಟ್ಟೆಚ್ಚರದ ಆದೇಶದ ನಡುವೆಯೂ ಇಬ್ಬರ ಭೀಕರ ಕೊಲೆ ನಡೆದಿದೆ. ಡಾಲರ್ಸ್ ಕಾಲೋನಿಯಲ್ಲಿ ಹಾಗೂ ನಗರದ ಹೊರ ವಲಯದಲ್ಲಿ ಇಬ್ಬರು ವ್ಯಕ್ತಿಗಳನ್ನು ಹತ್ಯೆಗೈಯಲಾಗಿದೆ. ಈ ಎರಡೂ ಪ್ರಕರಣಗಳಲ್ಲಿ ಅಡಿಗೆ ನೌಕರರು ಬಲಿಯಾಗಿದ್ದಾರೆ.
ಡಾಲರ್ಸ್ ಕಾಲೋನಿಯ 4ನೇ ಮುಖ್ಯರಸ್ತೆಯಲ್ಲಿ ನೇಪಾಳ ಮೂಲದ ಅಡಿಗೆ ಕೆಲಸದ ಕೃಷ್ಣ (18) ಎಂಬಾತನನ್ನು ಶನಿವಾರ ಮಧ್ಯರಾತ್ರಿ ಚಾಕುವಿನಿಂದ ಇರಿದು ಕೊಲ್ಲಲಾಗಿದೆ. ಕೃಷ್ಣನ ಕೈಗಡಿಯಾರ, ಆತ ಕೆಲಸದಲ್ಲಿದ್ದ ಅಮೆರಿಕಾ ಮೂಲದ ವಿಮಾ ಕಂಪನಿಯ ಅಧಿಕಾರಿಯ ಮನೆಯಲ್ಲಿದ್ದ ಅಮೂಲ್ಯ ವಸ್ತುಗಳು ಕಾಣೆಯಾಗಿವೆ ಎಂದು ಪೊಲೀಸರು ಹೇಳಿದ್ದಾರೆ.
ನಗರದ ಹೊರ ವಲಯದ ಕನ್ನ ಮಂಗಲ ಬಳಿಯ ಎಸ್ಟೇಟ್ನಲ್ಲಿ ನಡೆದ ಮತ್ತೊಂದು ಪ್ರಕರಣದಲ್ಲಿ ರಾತ್ರಿ ಕಾವಲುಗಾರ ಹಾಗೂ ಅಡಿಕೆ ಕೆಲಸದವನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ, ದೊಣ್ಣೆಯಿಂದ ಹೊಡೆದು ಕೊಲೆ ಮಾಡಲಾಗಿದೆ.
ಮುಂಬಯಿಯ ನಿವೃತ್ತ ಡಿಸಿಪಿ ಮೊಘಲ್ ಎಂಬುವವರಿಗೆ ಸೇರಿದ ಉಮ್ರಾವ್ ಎಸ್ಟೇಟ್ನಲ್ಲಿ ಈ ಕೃತ್ಯ ನಡೆದಿದೆ. ಡಾರ್ಜಿಲಿಂಗ್ ಮೂಲದ ಗುರು ಬಹಾದೂರ್ (40) ಕೊಲೆಯಾದ ವ್ಯಕ್ತಿ. ಆದರೆ ಇಲ್ಲಿ ಕೊಲೆಯ ಹಿಂದಿನ ಉದ್ದೇಶ ತಿಳಿದುಬಂದಿಲ್ಲ.
ಲೂಟಿ : ಈ ಮಧ್ಯೆ ಭಾನುವಾರ ಬೆಳಗಿನ ಜಾವ ದೇವರ ಜೀವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇರ್ಫಾನ್ ಪಾಷಾ ಎಂಬುವವರ ಮನೆಗೆ ಹಾಡುಹಗಲೇ ನುಗ್ಗಿದ ನಾಲ್ವರು ದುಷ್ಕರ್ಮಿಗಳು, ಮನೆಯವರ ಮೇಲೆ ಹಲ್ಲೆ ನಡೆಸಿ, 22 ಸಾವಿರ ರುಪಾಯಿ ಬೆಲೆ ಬಾಳುವ ನಗ -ನಾಣ್ಯ ದೋಚಿದ್ದಾರೆ.
ಕೊನೆ ಮಾತು : ಬೆಂಗಳೂರಿನಲ್ಲಿ ಈಗ ನಿತ್ಯವೂ ರಾತ್ರಿ 9ರ ನಂತರ ರಸ್ತೆಗೆ ತಡೆಗೋಡೆ ಹಾಕಿ, ಎಲ್ಲ ವಾಹನ ಚಾಲಕರನ್ನೂ ನಿಲ್ಲಿಸಿ, ಪೊಲೀಸರು ಕುಲ-ಗೋತ್ರ ವಿಚಾರಿಸುತ್ತಿದ್ದಾರೆ. ಕಳ್ಳರು, ಕೊಲೆಪಾತಕರು ಹಗಲಲ್ಲೇ ಊರು ಸೇರಿದ್ದರೆ ಇವರೇನು ಮಾಡುತ್ತಾರೆ?
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...