ತಮಿಳುನಾಡು ಸ್ಫೋಟಕ ಕಾರ್ಖಾನೆಯಲ್ಲಿಭಾರೀ ಸ್ಫೋಟ: 30 ಸಾವು
ಚೆನ್ನೈ : ವೆಲ್ಲೂರು ಜಿಲ್ಲೆಯ ಕಟ್ಪಾಡಿಯ ಬಳಿಯ ಸರ್ಕಾರಿ ಸ್ವಾಮ್ಯದ ತಮಿಳುನಾಡು ಸ್ಫೋಟಕ ತಯಾರಿಕಾ ಕಂಪನಿಯಲ್ಲಿ ಸಂಭವಿಸಿದ ಸ್ಫೋಟದಲ್ಲಿ 30 ಮಂದಿ ಸತ್ತಿದ್ದು ಅನೇಕರಿಗೆ ಗಾಯಗಳಾಗಿವೆ.
ಗುರುವಾರ ಮುಂಜಾನೆ 9.30ರ ಸುಮಾರಿನಲ್ಲಿ ದೊಡ್ಡದೊಂದು ಸ್ಫೋಟಕ ಸದ್ದು ಕಟ್ಪಾಡಿಯ ಸುತ್ತಮುತ್ತಲ ಸ್ಥಳಗಳವರೆಗೆ ಕೇಳಿಬಂತು. ಸ್ಫೋಟಕ ಕಂಪನಿಯಲ್ಲಿ ಬೆಂಕಿ ಸಹ ಕಾಣಿಸಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸ್ಫೋಟಕಗಳ ಮೇಲೆ ಆಕಸ್ಮಿಕವಾಗಿ ಕಿಡಿ ಬಿದ್ದು ಈ ದುರಂತ ಸಂಭವಿಸಿರಬಹುದು. ಮೃತರ ಕುಟುಂಬಗಳಿಗೆ ತಲಾ 50 ಸಾವಿರ ರುಪಾಯಿ, ಗಂಭೀರ ಸ್ವರೂಪದ ಗಾಯಗಳಾದವರಿಗೆ ತಲಾ 15 ಸಾವಿರ ಹಾಗೂ ಇತರೆ ಗಾಯಾಳುಗಳಿಗೆ ತಲಾ 6 ಸಾವಿರ ರುಪಾಯಿಯನ್ನು ತಮಿಳುನಾಡು ಸರ್ಕಾರ ಬಿಡುಗಡೆ ಮಾಡಿದೆ ಎಂದು ಮುಖ್ಯಮಂತ್ರಿ ಜಯಲಲಿತಾ ಹೇಳಿದ್ದಾರೆ.
ತಮಿಳುನಾಡಿನ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಪಾಂಡುರಂಗನ್ ಹಾಗೂ ಕೈಗಾರಿಕಾ ಸಚಿವ ಆರ್.ವೈದ್ಯಲಿಂಗಮ್ ಅವರನ್ನು ಪರಿಹಾರ ಕಾಮಗಾರಿಗಳ ಉಸ್ತುವಾರಿ ನೋಡಿಕೊಳ್ಳಲು ಮುಖ್ಯಮಂತ್ರಿ ಜಯಲಲಿತಾ ನೇಮಿಸಿದ್ದಾರೆ.
(ಯುಎನ್ಐ)