ಪುಸ್ತಕ ರೂಪದಲ್ಲಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ
ಬೆಂಗಳೂರು :ನಗರದಲ್ಲಿ ನಡೆಯುವ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಸಮಗ್ರ ಮಾಹಿತಿಗಳನ್ನು ರಾಜ್ಯ ಸರಕಾರ ಪುಸ್ತಕ ರೂಪದಲ್ಲಿ ಬಿಡುಗಡೆ ಮಾಡಲಿದೆ ಎಂದು ವಾರ್ತಾ ಸಚಿವ ಬಿ.ಕೆ. ಚಂದ್ರಶೇಖರ್ ತಿಳಿಸಿದ್ದಾರೆ.
ಹಿರಿಯ ಪತ್ರಕರ್ತ ಸಿ. ಸೀತಾರಾಂ ಬರೆದಿರುವ ‘ಎನ್. ಲಕ್ಷ್ಮೀನಾರಾಯಣ್ ಒಂದು ಅಧ್ಯಯನ’ ಎಂಬ ಪುಸ್ತಕ ಬಿಡುಗಡೆ ಮಾಡಿ ಮಾತನಾಡುತ್ತಿದ್ದ ಅವರು, ಚಲನ ಚಿತ್ರೋತ್ಸವದ ಆಗು ಹೋಗುಗಳು ಒಂದು ಪುಸ್ತಕ ರೂಪದಲ್ಲಿರುವುದು ಉತ್ತಮವೆನಿಸಿ ಈ ನಿರ್ಣಯಕ್ಕೆ ಬರಲಾಗಿದೆ ಎಂದು ಅವರು ಹೇಳಿದರು.
ವ್ಯಾಪಾರಿ ಮನೋಭಾವ ಮೈಗೂಡಿಸಿಗೊಂಡವರಿಂದಾಗಿ ಭಾರತೀಯ ಚಲನಚಿತ್ರರಂಗ ಯಾವುದೇ ಬದಲಾವಣೆಗಳಿಲ್ಲದೇ ಮುಂದುವರೆಯುತ್ತಿದೆ. ಸ್ವಾತಂತ್ರ್ಯಪೂರ್ವದಲ್ಲಿ ಭಾರತೀಯ ಚಲನಚಿತ್ರರಂಗದ ಸಾಮಾಜಿಕ ಮತ್ತು ಆರ್ಥಿಕ ಹಿನ್ನೆಲೆ ಹೇಗಿತ್ತೋ ಈಗಲೂ ಅದೇ ರೀತಿಯಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.
ಚಲನಚಿತ್ರದಲ್ಲಿ ಹೆಣ್ಣನ್ನು ಒಂದು ವಸ್ತುವನ್ನಾಗಿ ಬಳಸಿಕೊಳ್ಳಲಾಗುತ್ತಿದ್ದು , ಕೆಲವು ಸಿನೆಮಾಗಳಂತೂ ನೋಡುವುದಕ್ಕೇ ಅರ್ಹವಾಗಿರುವುದಿಲ್ಲ . ಉತ್ತಮ ಅಭಿರುಚಿಯ ಸಿನಿಮಾಗಳನ್ನು ಮಾಡಲು ಬರುವುದಿಲ್ಲವೇ ಎಂದು ಬಿಕೆಸಿ ವಿಷಾದಿಸಿದರು.
(ಇನ್ಫೋ ವಾರ್ತೆ)