ಅನಿವಾಸಿಭಾರತೀಯ ಮಕ್ಕಳಿಗೆ ಕೊಲ್ಲೂರು ದೇವಳದಿಂದ ವಸತಿ ಶಾಲೆ
ಮಂಗಳೂರು : ಕೊಲ್ಲೂರು ಮೂಕಾಂಬಿಕಾ ದೇವಳದ ವತಿಯಿಂದ ವಸತಿ ಶಾಲೆಯಾಂದನ್ನು ಆರಂಭಿಸಲಾಗುವುದು ಎಂದು ದೇವಸ್ಥಾನದ ನಿರ್ವಹಣಾ ಟ್ರಸ್ಟಿ ಬಿ.ಎಂ. ಸುಕುಮಾರ ಶೆಟ್ಟಿ ತಿಳಿಸಿದ್ದಾರೆ.
ಅನಿವಾಸಿ ಭಾರತೀಯರ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ನಿರ್ಮಿಸಲಾಗುವ ಈ ಶಾಲೆಗೆ ಈಗಾಗಲೇ ಮಲೇಷಿಯಾದಲ್ಲಿರುವ ಭಾರತೀಯರು ಶಾಲೆ ಪ್ರಾರಂಭಿಸಲು ಸಹಕರಿಸುವುದಾಗಿ ಹೇಳಿದ್ದಾರೆ. ದೇವಸ್ಥಾನದ ಆಡಳಿತ ಮಂಡಳಿ ರೂಪಿಸಿರುವ ಈ ಯೋಜನೆಯು ಮುಜರಾಯಿ ಇಲಾಖೆಯ ಒಪ್ಪಿಗೆ ಸಿಕ್ಕಿದ ತಕ್ಷಣವೇ ಪ್ರಾರಂಭವಾಗುವುದು.
ಮಲೇಷಿಯಾದ ಅಸಂಖ್ಯ ಭಕ್ತರು ಕೊಲ್ಲೂರು ದೇವಸ್ಥಾನಕ್ಕೆ ಭೇಟಿನೀಡುತ್ತಾರೆ. ಅವರ ಕೋರಿಕೆಯ ಮೇರೆಗೇ ಈ ಯೋಜನೆ ರೂಪಿಸಲಾಗಿದೆ. ಮಲೇಷಿಯಾದ ಭಕ್ತರೊಬ್ಬರು ದೇವಸ್ಥಾನಕ್ಕೆ ಈಗಾಗಲೇ 1.26 ಲಕ್ಷ ರೂಪಾಯಿ ದೇಣಿಗೆ ನೀಡಿದ್ದು ವಸತಿ ಶಾಲೆ ಆರಂಭಿಸುವ ಯೋಜನೆಗೆ ಸಹಕರಿಸುವುದಾಗಿ ಹೇಳಿದ್ದಾರೆ. ಸಿಂಡಿಕೇಟ್ ಬ್ಯಾಂಕ್ ಅಧ್ಯಕ್ಷ ಡಿ.ಟಿ. ಪೈ ಈಗಾಗಲೇ ಶಾಲೆಗೆ ಬೇಕಾದ ಪೀಠೋಪಕರಣವನ್ನು ಒದಗಿಸುವುದಾಗಿ ತಿಳಿಸಿದ್ದಾರೆ. ಒಟ್ಟಿನಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲೆ ಆರಂಭಿಸುವ ಪ್ರಯತ್ನ ನಡೆದಿದೆ ಎಂದು ಸುಕುಮಾರ್ ಹೇಳಿದರು.
(ಇನ್ಫೋ ವಾರ್ತೆ)