ಪಾತಾಳಕ್ಕಿಳಿದ ಅಡಿಕೆ ದರ, ಶಿವಮೊಗ್ಗ ಎಪಿಎಂಸಿ ಮಾರುಕಟ್ಟೆ ಬಂದ್
ಶಿವಮೊಗ್ಗ : ಜಿಲ್ಲೆಯ ಎ.ಪಿ.ಎಂ.ಸಿ ಮಾರುಕಟ್ಟೆಯಲ್ಲಿ ಅಡಿಕೆ ವ್ಯಾಪಾರ ವಹಿವಾಟನ್ನು ಬುಧವಾರ ಬೆಳಗ್ಗೆಯಿಂದ ಸ್ಥಗಿತಗೊಳಿಸಲಾಗಿದೆ.
ಈ ತಿಂಗಳ ಅಂತ್ಯದವರೆಗೆ ಅಡಿಕೆ ವ್ಯಾಪಾರ ವಹಿವಾಟನ್ನು ಮುಚ್ಚಲು ಅಡಿಕೆ ವರ್ತಕರ ಸಂಘ ನಿರ್ಧರಿಸಿದೆ ಎಂದು ಸಂಘದ ಅಧ್ಯಕ್ಷ ಭೂಪಾಳಂ ಸತ್ಯನಾರಾಯಣ ತಿಳಿಸಿದ್ದಾರೆ. ಕಳೆದ ಹತ್ತು ದಿನಗಳಿಂದ ಅಡಿಕೆ ಧಾರಣೆ ಕುಸಿಯುತ್ತಲೇ ಬಂದಿದ್ದು , ಮಂಗಳವಾರದ ಹೊತ್ತಿಗೆ ಅಡಿಕೆ ದರ ಪಾತಾಳಕ್ಕಿಳಿದಿತ್ತು. ಈ ಹಿನ್ನೆಲೆಯಲ್ಲಿ ಆಗಸ್ಟ್ ತಿಂಗಳಂತ್ಯದವರೆಗೆ ಅಡಿಕೆ ವ್ಯಾಪಾರವನ್ನು ಮುಚ್ಚಲು ನಿರ್ಧರಿಸಲಾಗಿದೆ.
ಉತ್ತರ ಭಾರತದಲ್ಲಿ ಅಡಿಕೆಗೆ ಬೇಡಿಕೆ ಕಡಿಮೆಯಾಗಿರುವುದು ಬೆಲೆ ಕುಸಿತಕ್ಕೆ ಕಾರಣವಾದರೂ, ಆಂತರಿಕ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಅನಪೇಕ್ಷಿತ ಸ್ಪರ್ಧೆಗಳು ಕೂಡ ವಿಪರೀತ ಬೆಲೆ ಕುಸಿತದ ಹಿಂದಿರುವ ಕಾರಣ ಎನ್ನಲಾಗಿದೆ. ಈ ವ್ಯಾಪಾರ ವಹಿವಾಟು ಸ್ಥಗಿತ, ಅಡಿಕೆ ವ್ಯಾಪಾರಕ್ಕೆ ಮಾತ್ರ ಸೀಮಿತವಾಗಿದ್ದು ಕಮಿಷನ್ ಮಂಡಿಗಳು ರೈತರೊಡನೆ ಎಂದಿನಂತೆ ತಮ್ಮ ಹಣಕಾಸಿನ ವಹಿವಾಟನ್ನು ನಡೆಸಲಿದ್ದಾರೆ ಎಂದು ಸತ್ಯನಾರಾಯಣ ತಿಳಿಸಿದ್ದಾರೆ.
(ಇನ್ಫೋ ವಾರ್ತೆ)