ವಿಶ್ವವಿದ್ಯಾಲಯ ತಿದ್ದುಪಡಿ ವಿಧೇಯಕಕ್ಕೆ ಮೇಲ್ಮನೆ ಅಂಗೀಕಾರ
ಬೆಂಗಳೂರು : ಪ್ರತಿಪಕ್ಷ ನಾಯಕರ ಸಭಾತ್ಯಾಗದ ನಡುವೆಯೂ ಕರ್ನಾಟಕ ವಿಶ್ವವಿದ್ಯಾಲಯಗಳ ತಿದ್ದುಪಡಿ ವಿಧೇಯಕ -2000 ಯಾವುದೇ ಬದಲಾವಣೆ ಇಲ್ಲದೆ ವಿಧಾನಪರಿಷತ್ತಿನಲ್ಲಿ ಮಂಗಳವಾರ ಧ್ವನಿ ಮತದ ಮೂಲಕ ಅನುಮೋದನೆ ಪಡೆಯಿತು.
ಪ್ರತಿಪಕ್ಷಗಳಾದ ಸಂಯುಕ್ತ ಜನತಾದಳ, ಜಾತ್ಯತೀತ ಜನತಾದಳ, ಬಿ.ಜೆಪಿ ಸದಸ್ಯರ ಪ್ರತಿರೋಧ, ಸಭಾತ್ಯಾಗದ ಬಳಿಕ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಸದಸ್ಯರು ಈ ವಿವಾದಾತ್ಮಕ ತಿದ್ದುಪಡಿ ವಿಧೇಯಕಕ್ಕೆ ಧ್ವನಿಮತದ ಅಂಗೀಕಾರ ನೀಡಿದರು.
ವಿ.ವಿ. ತಿದ್ದುಪಡಿ ವಿಧೇಯಕದ ಬಗ್ಗೆ ನಡೆದ ಸುದೀರ್ಘ ಚರ್ಚೆಯ ನಂತರ ಪ್ರತಿಪಕ್ಷ ಸದಸ್ಯರ ಪ್ರಶ್ನೆಗಳಿಗೆ ಉತ್ತರ ನೀಡಿದ ರಾಜ್ಯ ಉನ್ನತ ಶಿಕ್ಷಣ ಸಚಿವ ಜಿ. ಪರಮೇಶ್ವರ್ ಅವರು, ವಿಶ್ವವಿದ್ಯಾಲಯಗಳ ಆಡಳಿತ ಸುಧಾರಣೆಗೆ ಈ ವಿಧೇಯಕ ನೆರವಾಗುತ್ತದೆ ಎಂದು ಬಲವಾಗಿ ಸಮರ್ಥಿಸಿಕೊಂಡರು. ವಿ.ವಿ.ಗಳ ಶೈಕ್ಷಣಿಕ ಸ್ವಾಯತ್ತತೆ ವಿಚಾರದಲ್ಲಿ ಸರಕಾರ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ವಿಶ್ವವಿದ್ಯಾಲಯಗಳ ಧನ ಸಹಾಯ ಆಯೋಗದ ಸಲಹೆಗನುಗುಣವಾಗಿ ಹಾಗೂ ಡಾ. ನವನೀತರಾಮ್ ನೀಡಿರುವ ವರದಿಯ ಅನ್ವಯ ಸೆನೆಟ್ ರದ್ದು ಮೊದಲಾದ ಮಹತ್ವದ ಕ್ರಮ ಕೈಗೊಳ್ಳಾಗಿದೆ ಎಂದು ಸಚಿವರು ತಿಳಿಸಿದರು. ಸೆನೆಟ್ ರದ್ದು ವಿಚಾರದಲ್ಲಿ ಬಿಗಿ ನಿಲುವು ತಳೆದಿದ್ದ ಪ್ರತಿಪಕ್ಷ ಸದಸ್ಯರು ಸಚಿವರ ಉತ್ತರದಿಂದ ತೃಪ್ತರಾಗದೆ, ಸಭಾತ್ಯಾಗ ಮಾಡಿದರು.
ಈ ತಿಂಗಳ ಆರಂಭದಲ್ಲಿ ವಿಧಾನಸಭೆಯು ವಿ.ವಿ. ತಿದ್ದುಪಡಿ ವಿಧೇಯಕವನ್ನು ಅಂಗೀಕರಿಸಿದ್ದಾಗ್ಯೂ, ಮೇಲ್ಮನೆಯಲ್ಲಿ ಪ್ರತಿಪಕ್ಷ ಸದಸ್ಯರು ಸಭಾತ್ಯಾಗ ಮಾಡುವ ಮೂಲಕ ಕೆಳಮನೆಗೆ ಅಪಮಾನ ಎಸಗಿದ್ದಾರೆ ಎಂದು ಸಚಿವ ಜಿ. ಪರಮೇಶ್ವರ್ ಅಭಿಪ್ರಾಯಪಟ್ಟರು. ಪ್ರತಿಪಕ್ಷ ಸದಸ್ಯರ ಅನುಪಸ್ಥಿತಿಯಲ್ಲಿ ಸಭಾಪತಿ ಬಿ.ಎಲ್. ಶಂಕರ್ ಧ್ವನಿ ಮತದ ಮೂಲಕ ವಿಧೇಯಕವನ್ನು ಅಂಗೀಕರಿಸಿದರು.
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...