ವಿದ್ಯುನ್ಮಾನ ಆಡಳಿತದಿಂದ ಕುಗ್ರಾಮಕ್ಕೂ ಆಡಳಿತ-ನಾರಾಯಣಮೂರ್ತಿ
ಬೆಂಗಳೂರು : ಹಳ್ಳಿ ಹಳ್ಳಿಗೂ ಆಡಳಿತದ ವ್ಯವಸ್ಥೆ ಮುಟ್ಟುವಂತಾಗಲು ಭಾರತದಂತಹ ಬೃಹತ್ ದೇಶಕ್ಕೆ ವಿದ್ಯುನ್ಮಾನ ಆಡಳಿತ (ಇ- ಗವರ್ನನೆನ್ಸ್) ಅತ್ಯಗತ್ಯ ಎಂದು ಇನ್ಫೋಸಿಸ್ ಟೆಕ್ನಾಲಜೀಸ್ ಅಧ್ಯಕ್ಷ ಎನ್.ಆರ್.ನಾರಾಯಣಮೂರ್ತಿ ಹೇಳಿದ್ದಾರೆ.
ದೆಹಲಿ ಪೊಲೀಸ್ ಆಯುಕ್ತೆ ಕಿರಣ್ ಬೇಡಿ, ಪಾಂಡಿಚೇರಿಯ ಪರಮಿಂದರ್ ಸಿಂಗ್ ಹಾಗೂ ಸಂದೀಪ್ ಶ್ರೀವಾಸ್ತವ ಅವರು ಬರೆದಿರುವ ‘ಗವರ್ನಮೆಂಟ್ ಅಟ್ ನೆಟ್-ಭಾರತಕ್ಕೆ ಹೊಸ ಆಡಳಿತ ಅವಕಾಶಗಳು’ ಪುಸ್ತಕವನ್ನು ಸೋಮವಾರ ನಡೆದ ಕಾರ್ಯಕ್ರಮವೊಂದರಲ್ಲಿ ಬಿಡುಗಡೆ ಮಾಡಿ ನಾರಾಯಣಮೂರ್ತಿ ಮಾತನಾಡುತ್ತಿದ್ದರು.
ಆಡಳಿತದಲ್ಲಿ ಪಾರದರ್ಶಕತೆ ತರಲು, ಜನರ ಅಭಿಪ್ರಾಯಗಳನ್ನು ಸಂಗ್ರಹಿಸಿ ಅಭಿಪ್ರಾಯ ರೂಪಿಸಲು ಹಾಗೂ ಆಡಳಿತದ ವೆಚ್ಚವನ್ನು ಕಡಿ ಮೆ ಮಾಡಲು ವಿದ್ಯುನ್ಮಾನ ಆಡಳಿತ ಉಪಯೋಗಕಾರಿ. ಇದರಿಂದಾಗಿ ಜನ ಜೀವನವನ್ನು ಆರಾಮದಾಯಕವಾಗಿ ಪರಿವರ್ತಿಸಬಹುದು ಎಂದು ಅವರು ಹೇಳಿದರು.
ವಿದ್ಯುನ್ಮಾನ ಆಡಳಿತ ಜಾರಿಯಲ್ಲಿ ಕೈಗಾರಿಕೆಗಳು ಪ್ರಮುಖ ಪಾತ್ರ ವಹಿಸುತ್ತವೆ. ವಾಹನಗಳು, ಭೂ ನೋಂದಣಿ ಕಾರ್ಯಗಳನ್ನು ಸುಲಭವಾಗಿ ನಿರ್ವಹಿಸಬಹುದು. ಆರೋಗ್ಯ, ಶಿಕ್ಷಣ ಮುಂತಾದ ಕ್ಷೇತ್ರಗಳಲ್ಲೂ ವಿದ್ಯುನ್ಮಾನ ಆಡಳಿತ ಪರಿಣಾಮಕಾರಿ ಎಂದು ನಾರಾಯಣಮೂರ್ತಿ ಅಭಿಪ್ರಾಯಪಟ್ಟರು.
ಹಿರಿಯ ಪೊಲೀಸ್ ಅಧಿಕಾರಿ ಕಿರಣ್ ಬೇಡಿ, ಇನ್ಫೋಸಿಸ್ನ ನಂದನ್ ನೀಲೇಕಣಿ, ಇನ್ಫೋಸಿಸ್ ಫೌಂಡೇಶನ್ನ ಸುಧಾಮೂರ್ತಿ ಮತ್ತಿತರರು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
(ಇನ್ಫೋ ವಾರ್ತೆ)