‘ರಾಜಸ್ಥಾನ ಯುವಕ ಸಂಘ’ದ ಮಾನವೀಯ ಕಳಕಳಿಗೆತಲೆದೂಗಿದ ಕೃಷ್ಣ
ಬೆಂಗಳೂರು : ಪ್ರಕೃತಿ ವಿಕೋಪ ತಲೆದೋರಿದಾಗೆಲ್ಲ ಸಂತ್ರಸ್ತರ ನೆರವಿಗೆ ಧಾವಿಸುವ ‘ರಾಜಸ್ಥಾನ ಯುವಕ ಸಂಘ’ದ ಮಾನವೀಯ ಕಳಕಳಿಯನ್ನು ಶ್ಲಾಘಿಸಿರುವ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ , ಸಂಘಕ್ಕೆ ಸೂಕ್ತವಾದ ಸ್ಥಳದಲ್ಲಿ ನಿವೇಶನ ನೀಡುವುದಾಗಿ ಭರವಸೆ ನೀಡಿದ್ದಾರೆ.
ರಾಜಸ್ಥಾನ ಯುವಕ ಸಂಘದ 27 ನೇ ವಾರ್ಷಿಕೋತ್ಸವ ಪ್ರಯುಕ್ತ ಭಾನುವಾರ ನಗರದಲ್ಲಿ ನಡೆದ 3 ಸಾವಿರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಪುಸ್ತಕ ವಿತರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಸಂವೇದನಾಶೀಲ ಮನೋಭಾವ ಹಾಗೂ ಅಪರೂಪದ ಗುಣ ಹೊಂದಿರುವ ರಾಜಸ್ಥಾನದ ಯುವಕ ಯುವತಿಯರು ಜನಪರ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ ಎಂದು ಕೃಷ್ಣ ಸಂಘದ ಸದಸ್ಯರ ಬೆನ್ನು ತಟ್ಟಿದರು.
ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಇನ್ಫೋಸಿಸ್ ಸಂಸ್ಥೆ ನಿರ್ಮಿಸಿರುವ ಧರ್ಮಶಾಲೆಯ ಉಸ್ತುವಾರಿಯನ್ನು ರಾಜಸ್ಥಾನ ಯುವಕ ಸಂಘ ಭಾನುವಾರದಿಂದ ವಹಿಸಿಕೊಂಡಿರುವುದನ್ನು ಕೃಷ್ಣ ಶ್ಲಾಘಿಸಿದರು.
ಹಣ ಫುಟ್ಬಾಲ್ ಇದ್ದಂತೆ, ಹತ್ತಿರ ಬಂದಾಗ ಹೊರಗೆ ಕಳಿಸಿ
ಕಾಲ್ಚೆಂಡನ್ನು ಹೋಲುವ ಹಣವನ್ನು ಹತ್ತಿರಬಂದಾಗ ಹೊರಕಳಿಸಿದಾಗ ಮಾತ್ರ ದೇಶದ ಆರ್ಥಿಕ ಪರಿಸ್ಥಿತಿ ಉತ್ತಮವಾಗುತ್ತದೆ. ಸಮಾಜದಲ್ಲಿ ಬಡವರನ್ನು ಹಣವಂತರನ್ನಾಗಿ ಮಾಡಲು ಸಾಧ್ಯವಿಲ್ಲದಿದ್ದರೂ, ವಿದ್ಯಾವಂತರನ್ನಾಗಿ ಮಾಡಬಹುದು ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಆದಿಚುಂಚನಗಿರಿ ಸಂಸ್ಥಾನದ ಬಾಲ ಗಂಗಾಧರನಾಥ ಸ್ವಾಮೀಜಿ ಹೇಳಿದರು.
ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ರಾಜ್ಯ ಸಚಿವ ವಿ.ಶ್ರೀನಿವಾಸ ಪ್ರಸಾದ್, ಭಗವಾನ್ ಮಹಾವೀರರು ಪ್ರತಿಪಾದಿಸಿದ ಅಹಿಂಸೆ ಹಾಗೂ ಸಮಾಜದ ಇತರ ಸದಸ್ಯರೊಂದಿಗೆ ಅನುಕಂಪ ಭಾವನೆ ಹೊಂದುವ ತತ್ವದಂತೆ ಕೆಲಸ ಮಾಡುತ್ತಿರುವ ರಾಜಸ್ಥಾನ ಯುವಕ ಸಂಘದ ಸದಸ್ಯರ ಬಗ್ಗೆ ಸಂತೋಷ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ರತನ್ಚಂದ್ ನಹಾರ್, ಪಾರಸ್ಮಾಲ್ ಬನ್ಸಾಲಿ, ಆರ್.ಚೆನ್ರಾಜ್ ಜೈನ್ ಅವರಿಗೆ ‘ಸಮಾಜರತ್ನ’ ಪ್ರಶಸ್ತಿಯನ್ನು ಸಂಘದ ವತಿಯಿಂದ ನೀಡಿ ಗೌರವಿಸಲಾಯಿತು.
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ಕೃಷ್ಣಗಾರುಡಿಯ
ಕನ್ನಡಿ