ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಓದಿದ ಕಾಲೇಜಿಗೆ ಈಗ 100 ವರ್ಷ
ಬೆಂಗಳೂರು : ಅರಮನೆಗಳ ನಗರಿ ಮೈಸೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಮಹಾರಾಜಾ ಕಾಲೇಜಿನ ಶತಮಾನೋತ್ಸವ ಆಚರಣೆಗೆ ಸರಕಾರವೇ ಕ್ರಮ ಕೈಗೊಳ್ಳಲಿದೆ. ಈ ವಿಷಯವನ್ನು ಉನ್ನತ ಶಿಕ್ಷಣ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ.
ವಿಧಾನಪರಿಷತ್ತಿನಲ್ಲಿ ಸೋಮವಾರ ಕರ್ನಾಟಕ ವಿ.ವಿ. ತಿದ್ದುಪಡಿ ಕಾಯ್ದೆ ಸಂಬಂಧ ಚರ್ಚೆ ಮುಂದುವರಿದಿದ್ದಾಗ, ನೂತನ ಸಭಾಪತಿ ಬಿ.ಎಲ್. ಶಂಕರ್ ಅವರ ಸಲಹೆಗೆ ಪ್ರತಿಕ್ರಿಯೆ ನೀಡಿದ ಸಚಿವರು ಮಹಾರಾಜಾ ಕಾಲೇಜಿನ ಶತಮಾನೋತ್ಸವ ಆಚರಣೆಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ದೇಶದ ಅತ್ಯಂತ ಜನಪ್ರಿಯ ಮುಖ್ಯಮಂತ್ರಿ ಎಂದು ಕರೆಸಿಕೊಂಡಿರುವ ಎಸ್.ಎಂ. ಕೃಷ್ಣ, ಪ್ರತಿಪಕ್ಷದ ನಾಯಕರಾದ ಕೆ.ಎಚ್. ಶ್ರೀನಿವಾಸ್ ಸೇರಿದಂತೆ ಹಲವು ಗಣ್ಯರು ಓದಿದ ಈ ಪ್ರತಿಷ್ಠಿತ ಕಾಲೇಜಿಗೆ ಈಗ ನೂರು ವರ್ಷ ತುಂಬಿದೆ. ಈ ಎಲ್ಲ ಹಳೆಯ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಶತಮಾನೋತ್ಸವ ಆಚರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಶಂಕರ್ ಸಲಹೆ ಮಾಡಿದರು. ಸಭಾಪತಿಗಳ ಈ ಸಲಹೆಗೆ ಹಲವು ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.
(ಇನ್ಫೋ ವಾರ್ತೆ)