ಏಪ್ರಿಲ್ 1, 2002 ರಿಂದ ಸಮಗ್ರ ಮೌಲ್ಯ ವರ್ಧಿತ ತೆರಿಗೆ ಜಾರಿ?
ನವ ದೆಹಲಿ : ಬರುವ ಏಪ್ರಿಲ್ 1ರಿಂದ ಸಮಗ್ರ ಮೌಲ್ಯ ವರ್ಧಿತ ತೆರಿಗೆ (ವಿಎಟಿ) ಯನ್ನು ಜಾರಿಗೆ ತರುವುದರಿಂದ ಬೊಕ್ಕಸದ ಆದಾಯದಲ್ಲಿ ಯಾವುದೇ ಲುಕಸಾನು ಆಗದು ಎಂದು ರಾಜ್ಯ ಸರ್ಕಾರಗಳಿಗೆ ಕೇಂದ್ರ ವಿತ್ತ ಸಚಿವ ಯಶವಂತ ಸಿನ್ಹಾ ಶುಕ್ರವಾರ ಭರವಸೆ ಕೊಟ್ಟಿದ್ದಾರೆ.
ಸಂಸತ್ತಿನ ಪ್ರಶ್ನೋತ್ತರ ವೇಳೆಯಲ್ಲಿ ತ್ರಿಲೋಚನ್ ಕಣುಂಗೊ ಅವರಿಗೆ ಉತ್ತರ ಕೊಡುತ್ತಾ ಸಿನ್ಹಾ ಈ ಮಾತು ಹೇಳಿದರು. ಮಾರಾಟ ತೆರಿಗೆಯನ್ನು ವಿಎಟಿ ಆಗಿ ಪರಿವರ್ತಿಸುವುದರಿಂದ ಹಿಂದುಳಿದ ರಾಜ್ಯಗಳಿಗೆ ಯಾವುದೇ ಅನನುಕೂಲವಾಗಲೀ ವಿತ್ತ ಹಾನಿಯಾಗಲೀ ಆಗುವುದಿಲ್ಲ ಎಂದು ಹೇಳಿದರು.
ಕಳೆದ ಜುಲೈ 6ರಂದು ನಡೆದ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳ ಸಭೆಯಲ್ಲಿ ವಿಎಟಿ ಜಾರಿಗೆ ತರುವ ನಿರ್ಣಯ ಕೈಗೊಳ್ಳಲಾಯಿತು. ಇದರಲ್ಲಿ ಕೇಂದ್ರದ ಹಸ್ತಕ್ಷೇಪ ಇಲ್ಲವೇ ಇಲ್ಲ . ರಾಜ್ಯ ವಿತ್ತ ಸಚಿವರು ಹಾಗೂ ಮುಖ್ಯಮಂತ್ರಿಗಳ ಎರಡು ಸಮಿತಿಗಳು ವಿಎಟಿ ಕರಡಿಗೆ ಅಂತಿಮ ರೂಪು ನೀಡುತ್ತಿವೆ ಎಂದು ಸ್ಪಷ್ಟಪಡಿಸಿದರು.
‘ಬಹು ಅಂಶಗಳ ತೆರಿಗೆ ಪದ್ಧತಿಯಿಂದ ಆಸ್ತಿದಾರರಲ್ಲಿ ಗೊಂದಲ ಉಂಟಾಗುವುದರ ಜೊತೆಗೆ ಭ್ರಷ್ಟಾಚಾರಕ್ಕೂ ಅವಕಾಶ ದೊರೆಯುತ್ತದೆ. ಹೀಗಾಗಿ ರಾಜ್ಯಗಳಿಗೆ ಸವಾಲೊಡ್ಡಿರುವ ಕೇಂದ್ರ ಮಾರಾಟ ತೆರಿಗೆ ನೀತಿಯಲ್ಲಿ ಖಂಡಿತ ಬದಲಾವಣೆಗಳನ್ನು ತರುತ್ತೇನೆ’ ಎಂದು ಸಚಿವರು ಭರವಸೆ ಕೊಟ್ಟರು.
ಯಾವುದೇ ಉತ್ಪನ್ನ ಹಾಗೂ ವಿತರಣೆಯ ವಿವಿಧ ಹಂತಗಳಲ್ಲಿ ಮೌಲ್ಯ ವರ್ಧಿತ ತೆರಿಗೆ ವಿಧಿಸುವುದು ವಿಎಟಿಯ ಉತ್ತಮ ಅಂಶವಾಗಿದ್ದು, ಗೊಂದಲಗಳಿಗೆ ಪೂರ್ಣವಿರಾಮ ಹಾಕುವ ನಿಟ್ಟಿನಲ್ಲಿ ಇದು ಉತ್ತಮ ಹೆಜ್ಜೆ ಎಂದು ಸಿನ್ಹಾ ಅಭಿಪ್ರಾಯ ಪಟ್ಟರು.
(ಯುಎನ್ಐ)