ವಾರಾಹಿ, ತಣ್ಣೀರುಬಾವಿ ವಿದ್ಯುತ್ ಯೋಜನೆ ಅಪ್ರಸ್ತುತ : ಸಿಎಜಿ
ಬೆಂಗಳೂರು : ಶಿವಮೊಗ್ಗ ಹಾಗೂ ವಾರಾಹಿ ನಡುವಿನ ಹೆಚ್ಚುವರಿ ವಿದ್ಯುತ್ ಸಂಪರ್ಕ ಜಾಲಕ್ಕಾಗಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವು ಅನಾವಶ್ಯಕವಾಗಿ 24.25 ಕೋಟಿ ರುಪಾಯಿಗಳ ಬಂಡವಾಳ ಹೂಡಿದೆ. 220 ಕಿಲೋವ್ಯಾಟ್ ಸಾಮರ್ಥ್ಯದ ಈ ಜಾಲ ನಿರ್ಮಾಣಕ್ಕೆ ನಿಗಮ ಮಂಜೂರಾತಿ ನೀಡಿರುವುದೇ ಸರಿಯಲ್ಲ ಎಂದು ಸಿಎಜಿ ವರದಿ ಆಕ್ಷೇಪಿಸಿದೆ.
ಕೇಂದ್ರೀಯ ನಿಯಂತ್ರಕರು ಮತ್ತು ಮಹಾ ಲೆಕ್ಕಪರಿಶೋಧಕರುವ (ಸಿಎಜಿ) ವರದಿಯಲ್ಲಿ ಶಿವಮೊಗ್ಗ- ವಾರಾಹಿ - ಮಂಗಳೂರು ನಡುವೆ ಪ್ರಸ್ತುತ ಇರುವ 220 ಕಿಲೋ ವ್ಯಾಟ್ ಡಿ.ಸಿ. ಲೈನ್ ಹಾಗೂ ಸಿಂಗಲ್ ಸರ್ಕೀಟ್ ವ್ಯವಸ್ಥೆಯಿಂದ 350 ಮೆಗಾ ವ್ಯಾಟ್ ವಿದ್ಯುತ್ ಒತ್ತಡವನ್ನು ನಿಭಾಯಿಸಲು ಸಾಧ್ಯವಿದ್ದು, ಹೆಚ್ಚುವರಿ ಲೋಡ್ ಹೆಸರಿನಲ್ಲಿ ಈ ಯೋಜನೆಗೆ ಮಂಜೂರಾತಿ ನೀಡಿರುವುದು ಸರ್ವಸಮ್ಮತವಲ್ಲ ಎಂದು ತಿಳಿಸಲಾಗಿದೆ.
ಹೆಚ್ಚುವರಿ ಬಿಲ್ : ರಾಯಚೂರು ಶಾಖೋತ್ಪನ್ನ ಸ್ಥಾವರ, ಗುಟ್ಟೂರು, ನೆಲಮಂಗಲ ಹಾಗೂ ಶಿವಮೊಗ್ಗದಲ್ಲಿ ವಿದ್ಯುತ್ ಕಾಮಗಾರಿಗಳನ್ನು ನಿರ್ವಹಿಸಿದ ಕೆಲವು ಮಂದಿ ಗುತ್ತಿಗೆದಾರರಿಗೆ ಅಧಿಕ ಬಿಲ್ ಪಾವತಿ ಮಾಡಿರುವ ಬಗ್ಗೆಯೂ ಸಿ.ಎ.ಜಿ. ವರದಿಯಲ್ಲಿ ಉಲ್ಲೇಖಿಸಲಾಗಿದೆ.
ವಿದ್ಯುತ್ ಸಾಮಗ್ರಿ- ಉಪಕರಣ ಸರಬರಾಜು ವಿಷಯದಲ್ಲಿ ಗುತ್ತಿಗೆದಾರರು ಉಲ್ಲೇಖಿಸಿದ ದರ ಆಧರಿಸಿ ಬಿಲ್ ಮಾಡಲಾಗಿದ್ದು, ಅದರಿಂದ ನಿಗಮಕ್ಕೆ 15.67 ಕೋಟಿ ರುಪಾಯಿ ಹೆಚ್ಚುವರಿ ಹೊರೆ ಬಿದ್ದಿದೆ ಎಂದೂ ವರದಿ ತಿಳಿಸಿದೆ.
ತಣ್ಣೀರುಬಾವಿ ಯೋಜನೆ : 230 ಮೆಗಾವ್ಯಾಟ್ ಸಾಮರ್ಥ್ಯದ ತಣ್ಣೀರು ಬಾವಿ ಬಾರ್ಜ್ಮೌಂಟೆಡ್ ವಿದ್ಯುತ್ ಸ್ಥಾವರಕ್ಕೆ ಸಂಬಂಧಿಸಿದಂತೆ ಸರಕಾರ ತನ್ನ ನಿಲುವನ್ನು ಸಮರ್ಥಿಸಿಕೊಂಡಿದ್ದರೂ, ಸಿ.ಎ.ಜಿ. ತನ್ನ ವರದಿಯಲ್ಲಿ ಇದು ಅಪ್ರಸ್ತುತ ಎಂದು ಅಭಿಪ್ರಾಯಪಟ್ಟಿದೆ. ವಿದ್ಯುತ್ ದುರ್ಭಿಕ್ಷದಲ್ಲಿ ವಿದ್ಯುತ್ ನಿಲುಗಡೆ ಘೋಷಣೆಯ ನಡುವೆಯೂ ಎಸ್ಕಾರ್ಟ್ಸ್ ಹೆಚ್ಚುವರಿ ವಿದ್ಯುತ್ ಬಳಸಿರುವ ಬಗ್ಗೆ ಹಾಗೂ ಈ ಸಂಬಂಧ ಕ್ರಮಕೈಗೊಳ್ಳದಿರುವ ಬಗ್ಗೆ ಸಿ.ಎ.ಜಿ. ಆಕ್ಷೇಪ ವ್ಯಕ್ತಪಡಿಸಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...