ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಏನು ಮಾಡಬೇಕು?
ಬೆಂಗಳೂರು : ಲಕ್ಷಾಂತರ ರುಪಾಯಿಗಳ ಬಹುಮಾನ ಮೊತ್ತವುಳ್ಳ ಈ ಕ್ವಿಜ್ನಲ್ಲಿ ನೀವು ಪಾಲ್ಗೊಳ್ಳಬೇಕೇ? ಹಾಗಾದರೆ ನೀವು ಮಾಡಬೇಕಿರುವುದು ಇಷ್ಟೇ :
ಆಗಸ್ಟ್ 16ರಂದು ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗುವ ಜಾಹೀರಾತು ನೋಡಿ. ಅದರಲ್ಲಿರುವ 20 ಪ್ರಶ್ನೆಗಳಿಗೆ ಸರಿ ಉತ್ತರ ಬರೆದು, 18-8-01ಕ್ಕೆ ಮೊದಲು ನಿಮ್ಮ ಶಾಲೆಯ ಮುಖ್ಯೋಪಾಧ್ಯಾಯರು ಅಥವಾ ಪ್ರಾಂಶುಪಾಲರಿಗೆ ತಲುಪಿಸಿ. ಅವರು ನಿಮ್ಮ ಉತ್ತರ ಪತ್ರಿಕೆಗಳನ್ನು ಸ್ಥಳೀಯ ಡಿಡಿಪಿಐ ಕಚೇರಿಗೆ ತಲುಪಿಸುತ್ತಾರೆ.
ಶಾಲೆ- ಕಾಲೇಜುಗಳಿಂದ ಸ್ಪರ್ಧಾ ಪ್ರವೇಶದ ಉತ್ತರ ಪತ್ರಿಕೆಗಳು ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಮೂಲಕ, ದಿನಾಂಕ 27ರೊಳಗೆ ಬೆಂಗಳೂರಿನ ಎಂ.ಎಸ್. ಬಿಲ್ಡಿಂಗ್ನಲ್ಲಿರುವ ಮಾಹಿತಿ ತಂತ್ರಜ್ಞಾನ ಇಲಾಖೆಗೆ ತಲುಪುತ್ತವೆ. ಇಲಾಖೆಯವರು ನಿಮ್ಮ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಿ, ಅರ್ಹ ಸ್ಪರ್ಧಿಗಳನ್ನು ಆಯ್ಕೆ ಮಾಡುತ್ತಾರೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಸುತ್ತಿನ ಸ್ಪರ್ಧೆ ನಡೆಸಿ, ಪ್ರಥಮ 50 ಸ್ಥಾನ ಪಡೆಯುವ ತಂಡಗಳನ್ನು ವಲಯವಾರು ಸ್ಪರ್ಧೆಗೆ ಆಯ್ಕೆ ಮಾಡುತ್ತಾರೆ.
ಒಂದು ಶಾಲೆಯಿಂದ ಎಷ್ಟು ತಂಡಗಳು ಬೇಕಾದರೂ, ಪತ್ರಿಕೆಯಲ್ಲಿ ಪ್ರಕಟವಾಗುವ ಪ್ರಶ್ನೆಗಳಿಗೆ ಉತ್ತರ ನೀಡಿ, ಕಳುಹಿಸಬುದಾಗಿದೆ. ಕರ್ನಾಟಕದಲ್ಲಿ ಈ ಸ್ಪರ್ಧೆಗೆ ಆರು ವಲಯಗಳನ್ನು ಮಾಡಲಾಗಿದೆ. ಇದು ಗ್ರಾಮೀಣ ವಿದ್ಯಾರ್ಥಿಗಳಿಗೆ ಮೀಸಲಾದ ಸ್ಪರ್ಧೆಯಾದ್ದರಿಂದ, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಶಾಲೆ- ಕಾಲೇಜು ವಿದ್ಯಾರ್ಥಿಗಳಿಗೆ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅವಕಾಶ ಇಲ್ಲ.
ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಕ್ವಿಜ್ನ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆವ ತಂಡಕ್ಕೆ 50 ಸಾವಿರ ರುಪಾಯಿ, ದ್ವಿತೀಯ ಸ್ಥಾನ ಗಳಿಸುವ ತಂಡಕ್ಕೆ 30 ಸಾವಿರ ರುಪಾಯಿ ಹಾಗೂ ಮೂರನೇ ಸ್ಥಾನ ಗಳಿಸುವ ತಂಡಕ್ಕೆ 20 ಸಾವಿರ ರುಪಾಯಿ ಬಹುಮಾನ ನೀಡುತ್ತಿದೆ.
ಇದಲ್ಲದೆ ವಲಯವಾರು ವಿಭಾಗಗಳಲ್ಲಿ ಪ್ರಥಮ ಮೂರು ಸ್ಥಾನ ಗಳಿಸುವ ವಿದ್ಯಾರ್ಥಿಗಳಿಗೆ ಅನುಕ್ರಮವಾಗಿ 10 ಸಾವಿರ, 5 ಸಾವಿರ ಹಾಗೂ 3 ಸಾವಿರ ರುಪಾಯಿಗಳ ಸ್ಕಾಲರ್ಷಿಪ್ ನೀಡಲಿದೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಎಲ್ಲ ಸ್ಪರ್ಧಿಗಳಿಗೆ ಹಾಗೂ ಪ್ರೇಕ್ಷಕರಿಗೂ ಆಕರ್ಷಕ ಬಹುಮಾನಗಳ ಕೊಡುಗೆ ಇದೆ.
ಸ್ಪರ್ಧೆಯ ಮೊದಲ ಸುತ್ತಿನ ಪ್ರಶ್ನೆ ಪತ್ರಿಕೆಗೆ ಉತ್ತರಿಸಲು ನಿಮಗಿನ್ನೂ 6 ದಿನಗಳ ಕಾಲಾವಕಾಶ ಇದೆ. ಈಗಲೇ ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ನಿಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಿ. ಭಾರಿ ಮೊತ್ತದ ಬಹುಮಾನ ಗೆಲ್ಲಿ. ಕನ್ನಡ.ಇಂಡಿಯಾಇನ್ಫೋ.ಕಾಂ ನಿಮಗೆ ಶುಭ ಹಾರೈಸುತ್ತದೆ.
ವಾರ್ತಾ
ಸಂಚಯ
ಮುಖಪುಟ
/
ಕರ್ನಾಟಕ
ಸಿಲಿಕಾನ್
ಕಣಿವೆ